ವಡಗೇರಾ: ‘ಉಚಿತ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವುದರಿಂದ ಕುಟುಂಬಗಳ ಆರ್ಥಿಕ ಹೊರೆ ತಗ್ಗಲಿದೆ’ ಎಂದು ಕಾಂಗ್ರೆಸ್ ಯುವ ಮುಖಂಡ ಸನ್ನಿಗೌಡ ತುನ್ನೂರ ಹೇಳಿದರು.
ತಾಲ್ಲೂಕಿನ ನಾಯ್ಕಲ್ ಗ್ರಾಮದ ಬೀರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಪಂಚಶೀಲ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಪ್ರಸ್ತುತ ದಿನಮಾನಗಳಲ್ಲಿ ಮದುವೆಯ ಖರ್ಚು ವೆಚ್ಚಗಳು ಬಹಳ ಅಧಿಕವಾಗುತ್ತಿವೆ. ಸಾಲ ಮಾಡಿ ಮದುವೆಯಾಗುವುದಕ್ಕಿಂತ ಇಂತಹ ಸರಳ ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸಿ ಪ್ರತಿಯೊಬ್ಬರೂ ಮದುವೆಯಾಗಬೇಕು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿದ್ದನಗೌಡ ಕಾಡಂನೋರ ಮಾತನಾಡಿ,‘ಸಂಘ ಸಂಸ್ಥೆಗಳು ಸರಳ ಮದುವೆಗಳ ಬಗ್ಗೆ ಗ್ರಾಮಸ್ಥರು ಹಾಗೂ ಯುವಕರಲ್ಲಿ ಜಾಗೃತಿಯನ್ನು ಮೂಡಿಸಿ ಸರಳ ಮದುವೆಗಳಿಗೆ ಪ್ರೇರೇಪಿಸಬೇಕು’ ಎಂದು ಹೇಳಿದರು.
ಸಂಘದ ವತಿಯಿಂದ ನವ ವಧುವರರಿಗೆ ಮಾಂಗಲ್ಯ, ಕಾಲುಂಗುರ, ಬಟ್ಟೆಗಳನ್ನು ಉಚಿತವಾಗಿ ಕೊಡಲಾಯಿತು. ಇದೇ ವೇಳೆ 11 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪರಶುರಾಮ ಕುರುಕುಂದಾ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧಕ್ಷ ಚಂದ್ರಶೇಖರ್ ಮಾಗನೂರ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅನುಸುಗುರ, ಮರೆಪ್ಪ ಕ್ರಾಂತಿ, ಶರಬಣ್ಣ ಎಂ ದೋರನಹಳ್ಳಿ, ನಾಗರಾಜ ಕೊಡಮನಹಳ್ಳಿ, ಸಿದ್ದಪ್ಪ ಕೊಡಮನಹಳ್ಳಿ, ಚಂದ್ರು ಶಹಾಪುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.