ಶಹಾಪುರ: ‘ರಾಷ್ಟ್ರೀಯ ಸೇವಾ ಯೋಜನೆ 1969ರಲ್ಲಿ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಮತ್ತು ಯುವ ಜನರಿಗೆ ಗ್ರಾಮೀಣ ಜನರೊಂದಿಗೆ ಬೆರೆತು ಅಲ್ಲಿನ ಸಂಸ್ಕೃತಿಯನ್ನು ಮತ್ತು ಸಮಸ್ಯೆಗಳನ್ನು ಬಗ್ಗೆ ಅರಿವು ಮೂಡಿಸಲಾಗುತ್ತದೆ’ ಎಂದು ಅಧ್ಯಾಪಕ ಗಂಗಣ್ಣ ಹೊಸಮನಿ ಹೇಳಿದರು.
ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್ಎಸ್ಎಸ್ ‘ಎ’ ಮತ್ತು ‘ಬಿ’ ಘಟಕಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಕಾಯಕ್ರಮದಲ್ಲಿ ಅವರು ಮಾತನಾಡಿದರು.
ಎನ್ಎಸ್ಎಸ್ ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದಿನ ತಮ್ಮ ಸಾಮಾಜಿಕ ಬದುಕಿನ ರೀತಿ–ನೀತಿಗಳನ್ನು ಕಲಿಯುವುದರ ಜೊತೆಗೆ ಸೇವಾ ಮನೋಭಾವನೆ, ಪರಸ್ಪರರ ಅರ್ಥೈಯಿಸುವ ಹಾಗೂ ಗೌರವಿಸುವುದು ಅಲ್ಲದೆ ಸಮಸ್ಯೆಗಳಿಗೆ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಶಿವಲಿಂಗಣ್ಣ ಸಾಹು ಮಾತನಾಡಿ, ‘ಎನ್ಎಸ್ಎಸ್ ಘಟಕದ ಮೂಲಕ ಪ್ರಜಾಪ್ರಭುತ್ವ ಮನೋಭಾವ, ಸಹಿಷ್ಣುತೆ ಮನೋಭಾವನೆ, ಸಮಯ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಶಿಸ್ತು, ಧನಾತ್ಮಕ ಚಿಂತನೆ ಮುಂತಾದವುಗಳ ಕುರಿತು ತರಬೇತಿ ಪಡೆದುಕೊಂಡಿರುವ ವಿದ್ಯಾರ್ಥಿಗಳು ಇವೆಲ್ಲವನ್ನೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಉಪನ್ಯಾಸಕರಾದ ದೇವಿಂದ್ರಪ್ಪ ಆಲ್ದಾಳ, ಸಂಗಣ್ಣ ದಿಗ್ಗಿ, ಸತೀಶ ತುಳೇರ, ಮಾನಯ್ಯ ಗೌಡಗೇರಾ ಹಾಗೂ ಎನ್ಎಸ್ಎಸ್ ‘ಎ’ ಘಟಕ ಅಧಿಕಾರಿ ರಾಘವೇಂದ್ರ ಹಾರಣಗೇರಾ, ಎನ್ಎಸ್ಎಸ್ ‘ಬಿ’ ಘಟಕ ಅಧಿಕಾರಿ ಭೀಮಪ್ಪ ಭಂಡಾರಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ವಿವಿಧ ಕೌಶಲಗಳ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.