ವಡಗೇರಾ: ‘ದೇಶದಲ್ಲಿ ಬಿಜೆಪಿಯ ಉತ್ತಮ ಆಡಳಿತ ಸಹಿಸಿಕೊಳ್ಳದೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಎನ್ಡಿಎ ಸರ್ಕಾರ ಹೊಸದಾಗಿ ತರುವ ಪ್ರತಿಯೊಂದು ಕಾಯ್ದೆಯನ್ನು ಟೀಕಿಸುವುದು ಅವರಿಗೆ ರೂಢಿಯಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಪರಶುರಾಮ ಕುರಕುಂದಾ ಹೇಳಿದರು.
ಪಟ್ಟಣದ ಅಂಬಾಮಹೇಶ್ವರಿ ದೇವಸ್ಥಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಮುಸ್ಲಿಂ ಸಮುದಾಯದ ಜನರಿಗೆ ಸುಳ್ಳು ಸುದ್ದಿ ಹಬ್ಬಿಸಿ ಸರ್ಕಾರದ ವಿರುದ್ಧ ಪ್ರಚೊದನೆ ಮಾಡಿಸುತ್ತಿದ್ದಾರೆ. ರಫೆಲ್ ಯುದ್ದ ವಿಮಾನ ಖರೀದಿ ವಿಷಯದಲ್ಲಿ ಸಹ ಅಪಪ್ರಚಾರ ಮಾಡಿ ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ’ ಎಂದು ಟೀಕಿಸಿದರು.
ಬಿಜೆಪಿ ಮುಖಂಡ ಸಿದ್ದಣ್ಣಗೌಡ ಕಾಡಂನೋರ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮುಸ್ಲಿಂ ಸಮುದಾಯದ ಜನರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ವಿರೋಧ ಪಕ್ಷದವರು ತಪ್ಪು ಕಲ್ಪನೆ ಬಿತ್ತಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಯ್ದೆಗೆ ಬೆಂಬಲಿಸಲು ದೂ:88662 88662ಗೆ ಮಿಸ್ ಕಾಲ್ ಮಾಡಲು ಜನರಲ್ಲಿ ವಿನಂತಿಸಿದರು.
ಶ್ರೀನಿವಾಸಗೌಡ ಚನ್ನೂರು, ಡಾ.ಸುಭಾಷ್ ಕರಣಿಗಿ, ಡಾ.ಜಗದೀಶ್ ಹಿರೇಮಠ, ಸಿದ್ದಣ್ಣಗೌಡ ಕೋನಳ್ಳಿ, ರಡ್ಡಿಪ್ಪಗೌಡ ಕೋನಳ್ಳಿ, ವಿರೂಪಾಕ್ಷಪ್ಪಗೌಡ ಮಾಚನೂರು, ಶಂಕ್ರಣ್ಣ ಸಾಹು ಕರಣಿಗಿ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ರಾಜಶೇಖರ್ ಕಾಡಂನೋರ್, ಮಲ್ಲಿಕಾರ್ಜುನ ಕರಿಹಳ್ಳಿ, ಮಲ್ಲಣ್ಣ ಐಕೂರ, ಅಮ್ಮಣ್ಣಗೌಡ ಹೊಸ್ಮನಿ, ಶರಣಗೌಡ ಕ್ಯಾತನಾಳ, ಮಹಮ್ಮದ್ ಖುರೇಶ್, ಶಿವಕುಮಾರ ಕೊಂಕಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.