ಯಾದಗಿರಿ: ಕೋವಿಡ್ನಿಂದ ಜನರಲ್ಲಿ ಧೈರ್ಯ ಕಡಿಮೆ ಆಗಿದೆ. ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ. ಇದನ್ನು ತಡೆಯಲು ರೋಗ ನಿರೋಧಕ ಶಕ್ತಿ ಮತ್ತು ಮಾನಸಿಕ ಧೈರ್ಯ ಅಗತ್ಯ. ಭಗವದ್ಗೀತಾ ಗೀತೆಯಲ್ಲಿ ಅಭಯದ ಬಗ್ಗೆ ಪ್ರಸ್ತಾಪಿಸಲಾಗಿದೆಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದ ಲಕ್ಷ್ಮಿನಗರದಲ್ಲಿನ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಭಗವದ್ಗೀತಾ ಅಭಿಯಾನ ಜಿಲ್ಲಾ ಘಟಕದಿಂದಶನಿವಾರಆಯೋಜಿಸಿದ್ದ ಗೀತಾ ಅಭಿಯಾನ ಉದ್ಘಾಟಿಸಿ
ಅವರು ಮಾತನಾಡಿದರು.
ಲಯ ಬದ್ಧ, ವ್ಯಾಕರಣ ಶುದ್ಧವಾಗಿ ಶ್ಲೋಕ ಪಠಿಸುವುದರಿಂದ ಮನಸ್ಸಿನಲ್ಲಿ ಪ್ರಸನ್ನ ಭಾವ ಮೂಡುತ್ತದೆ. ಭಯವಿಲ್ಲದ ಜೀವನ ಸಾಗಿಸುವುದಕ್ಕೆ ಸ್ಫೂರ್ತಿ, ಪ್ರೇರಣೆ ನೀಡುತ್ತದೆ. ಹೆದರಿಕೆ ಆದಾಗ ಮನಸ್ಸು ವಿಚಲಿತಗೊಂಡು ಹಲವು ರೋಗಗಳಿಗೆ ಕಾರಣವಾಗುತ್ತದೆ. ಗೀತೆಯಲ್ಲಿ ಇದಕ್ಕೆ ಪರಿಹಾರ ಬೋಧಿಸಲಾಗಿದೆ. ಈಗಿನ ಸ್ಥಿತಿಯಲ್ಲಿ ಮನಸ್ಸನ್ನು ಸದೃಢಗೊಳಿಸುವ ಶಕ್ತಿ ಭಗವದ್ಗೀತೆ ನೀಡುತ್ತದೆ ಎಂದರು.
ಭಗವದ್ಗೀತೆಯಲ್ಲಿನ 18 ಅಧ್ಯಾಯಗಳ ಎಲ್ಲ 700 ಶ್ಲೋಕಗಳಲ್ಲಿನ ಅಂಶಗಳು ವ್ಯಕ್ತಿಗೆ ಶ್ರೇಷ್ಠತೆಯತ್ತ ಒಯ್ಯುವ ಜತೆಗೆ ಉತ್ತಮ ಬದುಕಿಗೆ ಸರಳ ಮಾರ್ಗ ತೋರಿಸುತ್ತವೆ. ಇದು ಮನುಕುಲ ಉದ್ಧಾರದ ಮೌಲಿಕ
ಗ್ರಂಥ ಎಂದರು.
ಭಗವಂತನ ನಿರಂತರ ಸಂಬಂಧದ ಆವಿರ್ಭಾವವೇ ಜ್ಞಾನ. ಅಂಥ ಜ್ಞಾನವನ್ನು ನಾವು ಗೀತೆಯಿಂದ ಪಡೆದುಕೊಳ್ಳಬಹುದಾಗಿದೆ. ಭಗವದ್ಗೀತೆ ಕೆಲವರಿಗಷ್ಟೇ ಸೀಮಿತ ಎಂದು ಹೇಳುತ್ತ ಜನರನ್ನು ಜ್ಞಾನಭಂಡಾರದ ಮಹಾ ಗ್ರಂಥದಿಂದ ವ್ಯವಸ್ಥಿತವಾಗಿ ದೂರವಿಡುತ್ತಿದ್ದಾರೆ. ಜನತೆ ವಾಸ್ತವ ಅರಿತು ಓದಬೇಕು. ಅಧ್ಯಾತ್ಮಯೋಗ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಸೇರಿ ಇದರಲ್ಲಿನ ನಾನಾ ಅಂಶಗಳು ಮನುಷ್ಯನಿಗೆ ಅಗಾಧ ಸಾಧನೆಯತ್ತ ಒಯ್ಯುತ್ತವೆ ಎಂದು ಪ್ರತಿಪಾದಿಸಿದರು.
ಸಂಚಾಲಕ ಅನಿಲ ದೇಶಪಾಂಡೆ ಪ್ರಸ್ತಾವಿಕ ಮಾತನಾಡಿದರು.
ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ, ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರು, ಜೆಡಿಎಸ್ ರಾಜ್ಯ ನಾಯಕ ಶರಣಗೌಡ ಕಂದಕೂರ, ರಮೇಶ ದೊಡಮನಿ, ಪ್ರಮುಖರಾದ ವೆಂಕಟರಮಣ ಹೆಗಡೆ, ರವೀಂದ್ರ ಕುಲಕರ್ಣಿ ಇದ್ದರು. ಪದವಿ ಕಾಲೇಜು ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.