ADVERTISEMENT

ಶಹಾಪುರ:ಜಾನುವಾರುಗಳ ಜಾತ್ರೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 5:20 IST
Last Updated 9 ಏಪ್ರಿಲ್ 2022, 5:20 IST
ಶಹಾಪುರ ನಗರದ ಚರಬಸವೇಶ್ವರ ಜಾನುವಾರುಗಳ ಜಾತ್ರೆಯಲ್ಲಿ ರೈತರು ವಿವಿಧ ಬಗೆಯ ಹಗ್ಗಗಳನ್ನು ಖರೀದಿಸಿದರು
ಶಹಾಪುರ ನಗರದ ಚರಬಸವೇಶ್ವರ ಜಾನುವಾರುಗಳ ಜಾತ್ರೆಯಲ್ಲಿ ರೈತರು ವಿವಿಧ ಬಗೆಯ ಹಗ್ಗಗಳನ್ನು ಖರೀದಿಸಿದರು   

ಶಹಾಪುರ: ಸಗರನಾಡಿನ ಹಾಗೂ ಯುಗಾದಿ ಹಬ್ಬದ ಹೊಸ ವರ್ಷದ ಜಾನುವಾರುಗಳ ಜಾತ್ರೆಯು ನಗರದ ಚರಬಸವೇಶ್ವರ ದೇವಸ್ಥಾನದ (ನಾಗರ ಕೆರೆ) ಆವರಣದಲ್ಲಿ ಶುರುವಾಗಿದೆ.

‘ದಕ್ಷಿಣ ಕನ್ನಡದ ಶಿರಸಿ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ನಿಷೇಧ ಹೇರಿದ್ದ ಘಟನೆ ಎಲ್ಲೆಡೆ ಪ್ರಭಾವ ಬೀರುತ್ತದೆ ಎನ್ನುವ ನಿರೀಕ್ಷೆ ಇಲ್ಲಿ ಹುಸಿಯಾಗಿದೆ. ರೈತರು ಹಾಗೂ ವರ್ತಕರು ಎತ್ತು, ಹೋರಿಗಳನ್ನು ಖರೀದಿಸಲು ಜಾತ್ರೆಗೆ ಆಗಮಿಸಿದ್ದಾರೆ. ರೈತರು ಕೃಷಿ ಪರಿಕರಗಳನ್ನು ಖರೀದಿಸುವ ಜೊತೆಗೆ ಜಾನುವಾರುಗಳಿಗೆ ಬೇಕಾಗುವ ಹಗ್ಗ, ಮಗಡ, ಬಾರುಕೋಲು, ಗೆಜ್ಜೆ, ಬಾರು, ಮೂಗುದಾಣಿ ಹೀಗೆ ವಿವಿಧ ಸಾಮಗ್ರಿಗಳನ್ನು ಮುಸ್ಲಿಂ ಸಮುದಾಯದವರು ಹಾಕಿದ ಮಳಿಗೆಯಲ್ಲಿ ಖರೀದಿಸಿದರು.

’ಯಾವುದೇ ಜಾತಿ, ಧರ್ಮದ ತಾರತಮ್ಯ ನಮ್ಮ ಬಳಿ ಇಲ್ಲ. ಸಗರನಾಡು ಭಾವೈಕ್ಯತೆಯ ಬೀಡು. ಎಲ್ಲಾ ಜಾತಿ ಧರ್ಮದವರು ಒಟ್ಟಿಗೆ ಕೂಡಿ ಜಾತ್ರೆ ಆಚರಿಸಿದರೆ ಅದರ ಸಂಭ್ರಮವೇ ಬೇರೆ’ ಎನ್ನುತ್ತಾರೆ ಜಾತ್ರೆಗೆ ಆಗಮಿಸಿದ ರೈತ ಮಾನಪ್ಪ ಮುಡಬೂಳ.

ADVERTISEMENT

’ಜಾತ್ರೆಯಲ್ಲಿ ಹೆಚ್ಚಾಗಿ ಮುಸ್ಲಿಂ ಸಮುದಾಯದರು ಹೋಟೆಲ್ ಹಾಗೂ ಇನ್ನಿತರ ಮಳಿಗೆ ಹಾಕಿದ್ದಾರೆ. ಎರಡು ವರ್ಷದಿಂದ ಕೋವಿಡ್ ಸಂಕಷ್ಟದಿಂದ ತೊಂದರೆ ಅನುಭವಿಸಿದ್ದೆವು. ಈಗ ತುಸು ನೆಮ್ಮದಿಯಾಗಿ ವ್ಯಾಪಾರ ಮಾಡಬೇಕು ಎನ್ನುವುದರಲ್ಲಿ ಧರ್ಮದ ನಂಜು ತಂದಾಗ ನಮಗೆ ಜಂಘಾಬಲವೇ ಉಡುಗಿ ಹೋಗಿತ್ತು. ಮುಂದೇನು ಎಂಬ ಆತಂಕ ಶುರುವಾಗಿತ್ತು. ನಮ್ಮಲ್ಲಿ ಅಂತಹ ದ್ವೇಷ ಭಾವನೆಯೇ ಇಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ. ವ್ಯಾಪಾರ ಅಷ್ಟು ಚುರುಕಾಗಿಲ್ಲ. ಇನ್ನೆರಡು ದಿನ ಜಾತ್ರೆ ಇದೆ. ರೈತರು ಜಾತ್ರೆಗೆ ಬರುವ ಸಾಧ್ಯತೆ ಇದೆ’ ಎನ್ನುವ ಅಶಾಭಾವನೆಯನ್ನು ವ್ಯಾಪಾರಿ ಮಹಿಬೂಬು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.