ಯಾದಗಿರಿ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮೇಲೆ ಸಿಬಿಐ ದಾಳಿ ನಡೆದಿರುವ ರಾಜಕೀಯ ಪ್ರೇರಿತ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರ ಆರೋಪಿಸಿದರು.
‘ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ, ಪರಿಷತ್ ಚುನಾವಣೆ ನಡೆಯುವ ಹೊಸ್ತಿಲಲ್ಲಿ ಅವರನ್ನು ಹತ್ತಿಕ್ಕಲು ಕುತಂತ್ರ ನಡೆಸಿದ್ದಾರೆ. ಇಂಥ ರಾಜಕಾರಣ ಮಾಡಬಾರದು’ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ದೇಶದಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಿದೆ. ಇದು ಜನರಿಗೆ ಅರ್ಥವಾಗುತ್ತದೆ. 2017ರಿಂದ ಐಟಿ, ಇ.ಡಿ. ತನಿಖೆ ನಡೆಸಿದ್ದಾರೆ. ಈಗ ಸಿಬಿಐನಿಂದ ದಾಳಿ ಮಾಡಿಸಿದ್ದಾರೆ. ಆಳುವ ಪಕ್ಷಗಳು ತಮಗೆ ಬೇಕಾದಂತೆ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ. ದೇಶದಲ್ಲಿ ಹಲವು ರಾಜಕಾರಣಿಗಳು ಶ್ರೀಮಂತರಿದ್ದಾರೆ. ಅವರ ಮೇಲೆ ನಡೆಯದ ದಾಳಿ ರಾಜ್ಯದ ಶಿವಕುಮಾರ ಅವರ ಮೇಲೆ ಮಾತ್ರ ಯಾಕೆ ನಡೆಯುತ್ತದೆ. ಇದು ರಾಜಕೀಯವಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದರು.
‘ಡಿ.ಕೆ.ಶಿವಕುಮಾರ ಅವರು ಎಲ್ಲದಕ್ಕೂ ಟ್ಯಾಕ್ಸ್ ಕಟ್ಟುತ್ತಾ ಬಂದಿದ್ದಾರೆ. ಆದರೂ ಅವರನ್ನು ಗುರಿಯಾಗಿಸಿ ಕಳೆದ ಮೂರು ವರ್ಷದಿಂದ ದಾಳಿ ಮಾಡಲಾಗುತ್ತಿದೆ. ಇದು ಬಿಜೆಪಿಯ ಕುತಂತ್ರ ಬುದ್ಧಿ’ ಎಂದರು.
‘ಕಾಂಗ್ರೆಸ್ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಬಿಜೆಪಿಯಿಂದಗದಾ ಪ್ರಹಾರ ನಡೆಯುತ್ತಿದೆ. ಇದು ನಿಲ್ಲಬೇಕು. ಶಿವಕುಮಾರ ಅವರಿಗೆಜೈಲಿಗೆ ಹೋಗುವುದು ಬರುವುದು ರೂಢಿಯಾಗಿದೆ. ಆದರೆ, ಇಂಥಗಳ ಘಟನೆಯಿಂದ ಸಂಸ್ಥೆಗಳ ನಂಬಿಕೆ ಕಳೆದುಕೊಳ್ಳುತ್ತದೆ’ ಎಂದರು.
ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ್ ಜೈನ್, ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾನಸಗಲ್,ಮರೆಪ್ಪ ಬಿಳ್ಹಾರ, ಚಿದಾನಂದಪ್ಪ ಕಾಳಬೆಳಗುಂದಿ, ವೆಂಕಟರೆಡ್ಡಿ ಗುರುಸುಣಗಿ, ಮಹಿಪಾಲರೆಡ್ಡಿ ಪಾಟೀಲ ಹತ್ತಿಕುಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.