ಸೈದಾಪುರ: ಕಡೇಚೂರು ಮತ್ತು ಬಾಡಿಯಾಳ ಗ್ರಾಮದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ಫ್ಯಾಕ್ಟರಿಗಳಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ವರಿಷ್ಠರ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸುವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರೆಡ್ಡಿ ನಾಯ್ಕಲ್ ತಿಳಿಸಿದರು.
ಸಮೀಪದ ಕಡೇಚೂರು ಗ್ರಾಮದಲ್ಲಿ ಪಂಚಾಯಿತಿ ಚುನಾವಣಾ ಬಹಿಷ್ಕಾರ ಕುರಿತು ಕರೆದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.
ಪರಿಸರಕ್ಕೆ ಮತ್ತು ಗ್ರಾಮದ ರೈತಾಪಿ ವರ್ಗಕ್ಕೆ ಹಾಗೂ ಸುತ್ತಮುತ್ತಲಿನ ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಕೈಗಾರಿಕೆಗಳು ನಿರ್ಮಾಣವಾಗುತ್ತಿರುವ ಬಗ್ಗೆ ನಮ್ಮ ವರಿಷ್ಠರ ಗಮನಕ್ಕೆ ತಂದು ನಿಮಗೆ ನ್ಯಾಯ ಒದಗಿಸಿಕೊಡುತ್ತೇವೆ ಎಂಬ ಭರವಸೆ ನೀಡಿದರು.
ನಂತರ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯೆ ನಾಗರತ್ನ ಕುಪ್ಪಿ ಮಾತನಾಡಿ, ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಜನರ ಸಮಸ್ಯೆಗೆ ಪರಿಹಾರ ನೀಡಲು ಗ್ರಾಮದ ಜನರ ಜೊತೆಯಲ್ಲಿ ಯಾವಾಗಲೂ ಜೊತೆಯಲ್ಲಿರುತ್ತೇವೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಅವಕಾಶ ಮಾಡಿಕೊಡುವ ಮೂಲಕ ಸತ್ಯಾಗ್ರಹ ಹಿಂಪಡೆಯಿರಿ ಎಂದರು.
ನಂತರ ಹಿರಿಯ ಮುಖಂಡ ಸಿದ್ದಣ್ಣಗೌಡ ಕಡೇಚೂರು ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತ ಪರಿಸರಕ್ಕೆ ಹಾನಿಯಾಗದಂತಹ ಕೈಗಾರಿಕೆ ಕಂಪನಿಗಳಿಗೆ ಅವಕಾಶ ಕೊಡಬೇಕು. ಜಮೀನು ಕಳೆದುಕೊಂಡ ಭೂಮಾಲೀಕರ ಪ್ರತಿಕುಟಂಬಕ್ಕೆ ಒಬ್ಬರಿಗೆ ನೌಕರಿ ನೀಡುವ ಬಗ್ಗೆ ಮುಚ್ಚಳಿಕೆ ಪತ್ರ ಬರೆದು ಕೊಡಬೇಕು. ಅನ್ಯಾಯ ಸರಿಪಡಿಸುವವರಿಗೆ ಈಗ ಘೋಷಣೆಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಎಲ್ಲಾ ವಿದಧ ಚುನಾವಣೆಗಳನ್ನು ಬಹಷ್ಕಾರ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡ ಸಾಯಿಬಣ್ಣ ಬೋರಬಂಡಾ, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ, ತಾ.ಪಂ ಸದಸ್ಯರಾದ ಚಂದಪ್ಪ ಕಾವಲಿ, ಗೌಸುದ್ದೀನ್ ಚಂದಾಪುರ, ಯುವ ಮೋರ್ಚಾ ಅಧ್ಯಕ್ಷ ಬಸ್ಸುಗೌಡ ಐರಡ್ಡಿ, ಮಲ್ಲಣ್ಣಗೌಡ ದುಪ್ಪಲ್ಲಿ, ಪರ್ವತರೆಡಿಗೌಡ, ಲಕ್ಷ್ಮಣ ನಾಯಕ ನೀಲಹಳ್ಳಿ, ಅಂಬ್ರೇಶ ಪಾಟೀಲ್, ಗ್ರಾಮಸ್ಥರಾದ ಸೈಯದ ಅಲಿ ಹಸನ್, ಮಹಿಮೂದ ಪಾಷಾ, ಶಂಕರಲಿಂಗ ಕಡೇಚೂರು, ಅಬ್ದುಲ ಘನಿ, ಜುಬೇರ ಪಾಷಾ, ಹಣಮಂತ ದೊಡ್ಮನಿ, ಖಾಜಹುಸೇನ್, ಚಂದ್ರು ಗಡ್ಡಿಮನಿ, ಸಾಬಣ್ಣ, ರಾಜಮೆತ್ರಿ, ಅಂಜಪ್ಪ ಡೀಲರ, ಕಾಶಿನಾಥ ಕಲಾಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.