ಯಾದಗಿರಿ: ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಿಸಲಾಗಿದೆ. ಹೀಗಿದ್ದರೂ ಪೌರಕಾರ್ಮಿಕರು ನಿಸ್ವಾರ್ಥವಾಗಿ ಸ್ವಚ್ಛತೆ ಕಡೆಗೆ ಗಮನ ಹರಿಸುತ್ತಿದ್ದಾರೆ. ಇದು ಶ್ಲಾಘನೀಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವೀರಶೈವ ಸಮಾಜ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ವರ್ಧಮಾನ್ ಟ್ರೇಡಿಂಗ್ ಕಂಪನಿ ವತಿಯಿಂದ ತಲಾ 10 ಕೆ.ಜಿ. ಜೋಳ ವಿತರಿಸಿ ಅವರು ಮಾತನಾಡಿದರು.
ಸಾಹಿತ್ಯ ಪರಿಷತ್ತು ಮತ್ತು ವೀರಶೈವ ಸಮಾಜದವರು ಪೌರಕಾರ್ಮಿಕರ ಸೇವೆ ಗಮನಿಸಿ ಸಹಕಾರ ನೀಡುತ್ತಿರುವುದು ಪ್ರಶಂಸನೀಯ. ಇದರಂತೆ ಎಲ್ಲರೂ ಸ್ವ ಇಚ್ಛೆಯಿಂದ ಮುಂದೆ ಬಂದು ಕೊರೊನಾ ತಡೆಗಟ್ಟಲು ಹೋರಾಡುತ್ತಿರುವ ಸರ್ವರಿಗೂ ಸಹಕರಿಸುವಂತೆ ಕರೆ ನೀಡಿದರು.
ಇದೇ ವೇಳೆ ಸುಮಾರು 80 ಜನ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರಾಯುಕ್ತ ರಮೇಶ ಸುಣಗಾರ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ನಗರ ವೀರಶೈವ ಸಮಾಜ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್, ಡಾ.ಸುಭಾಶ್ಚಂದ್ರ ಕೌಲಗಿ, ಸುಭಾಷ ಆಯಾರಕರ್, ಬಸವರಾಜ ಮೋಟ್ನಳ್ಳಿ, ಡಾ.ಭೀಮರಾಯ ಲಿಂಗೇರಿ, ಡಾ. ಎಸ್.ಎಸ್. ನಾಯಕ, ನಗರಸಭೆ ಸದಸ್ಯರಾದ ಹಣಮಂತ ಇಟಗಿ, ವಿಲಾಸ ಪಾಟೀಲ, ಸ್ವಾಮಿದೇವ ದಾಸನಕೇರಿ, ಮಾರುತಿ ಕಲಾಲ್, ಖಂಡಪ್ಪ ದಾಸನ್, ಭೀಮಣ್ಣಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಳ, ಬಸಣ್ಣಗೌಡ ಕನ್ಯೆಕೌಳೂರು, ನಾಗೇಂದ್ರ ಜಾಜಿ, ದೇವಿಂದ್ರ ಸೇಡಂಕರ್, ಬಸವರಾಜ ದೇವದುರ್ಗ, ಮಲ್ಲಪ್ಪ ಹಳ್ಳಿಕಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.