ADVERTISEMENT

ದಬ್ ದಬಿಗೆ ಸ್ವಚ್ಛತೆಯೇ ಸವಾಲು

ಎಂ.ಪಿ.ಚಪೆಟ್ಲಾ
Published 21 ಜನವರಿ 2021, 2:46 IST
Last Updated 21 ಜನವರಿ 2021, 2:46 IST
ಗುರುಮಠಕಲ್ ಹೊರವಲಯದ ನಜರಾಪುರದ ದಬ್ ದಬಿ ಜಲಪಾತದ ನಯನ ಮನೋಹರ ದೃಶ್ಯ (ಸಂಗ್ರಹ ಚಿತ್ರ)
ಗುರುಮಠಕಲ್ ಹೊರವಲಯದ ನಜರಾಪುರದ ದಬ್ ದಬಿ ಜಲಪಾತದ ನಯನ ಮನೋಹರ ದೃಶ್ಯ (ಸಂಗ್ರಹ ಚಿತ್ರ)   

ಗುರುಮಠಕಲ್: ತಾಲ್ಲೂಕಿನ ನಜರಾಪುರ ಗ್ರಾಮದ ಹೊರವಲ ಯದಲ್ಲಿರುವ ದಬ್ ದಬಿ ಪ್ರವಾಸಿಗರ ಪ್ರಮುಖ ಆಕರ್ಷಣೆ. ಆದರೆ ವೀಕ್ಷಣಾ ಸ್ಥಳದಲ್ಲಿರುವ ಪ್ಲಾಸ್ಟಿಕ್‌ ರಾಶಿ, ತ್ಯಾಜ್ಯ, ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು ಮತ್ತು ತ್ಯಾಜ್ಯದ ದುರ್ನಾತ ಜಲಪಾತದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ.

ಸುತ್ತಲೂ ಹಸಿರಿನಿಂದ ಕೂಡಿರುವ ಪರಿಸರ ಮತ್ತು ಭೋರ್ಗರೆಯುವ ಜಲಪಾತದ ಜಲಸಿರಿಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಇಲ್ಲಿಗೆ ಹರಿದು ಬರುತ್ತಿದೆ. ಆದರೆ ಇಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯದ ಕೊರತೆ ಕಾಡುತ್ತಿದೆ.

ಜಲಪಾತದ ಸುತ್ತಮುತ್ತ ತ್ಯಾಜ್ಯ ಬಿದ್ದಿದ್ದೆ. ಇದು ಪ್ರವಾಸಿಗರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ. ಅಲ್ಲದೆ ಜಲಪಾತಕ್ಕೆ ತೆರಳುವ ರಸ್ತೆಗೆ ಯಾವುದೇ ತಡೆಗೋಡೆ ಮಾಡಿಲ್ಲ. ಆಳವಾದ ಕಂದಕವಿದ್ದು, ಯಾಮಾರಿದರೆ ಕೆಳಕ್ಕೆ ಬೀಳುವ ಸಂಭವವಿದೆ.

ADVERTISEMENT

ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟರೂ ಯಾವುದೇ ಅರಣ್ಯ ರಕ್ಷಕರು ಅಲ್ಲಿ ಕಾಣಸಿಗುವುದಿಲ್ಲ. ಇದರಿಂದ ಜಲಪಾತದ ಬಳಿ ಕುಡಿದು ಬಿಸಾಡಿದ ಬಾಟಲಿಗಳು, ಪ್ಲಾಸ್ಟಿಕ್‌ ತ್ಯಾಜ್ಯ ರಾಶಿ ಕಾಣಿಸುತ್ತದೆ. ಅರಣ್ಯದಲ್ಲಿ ಅಭಿವೃದ್ಧಿ ಮಾಡಲು ಅವಕಾಶವಿಲ್ಲದಿದ್ದರಿಂದಲೇ ಆ ನಿಮಯಗಳೇ ಪ್ರವಾಸಿಗರನ್ನು ಸೆಳೆಯಲು ವಿಫಲವಾಗಿವೆ.

‘ಇಷ್ಟೊಂದು ಸುಂದರ ಜಲಪಾತವನ್ನು ಅಭಿವೃದ್ಧಿ ಮಾಡದಿರುವುದು ಆಶ್ಚರ್ಯ. ಇಲ್ಲಿ ಸರ್ಕಾರದ ಒಂದು ಕಟ್ಟಡವೂ ಇಲ್ಲ. ಕಚೇರಿ, ಅಧಿಕಾರಿಗಳಿಲ್ಲ. ಮಾಹಿತಿ ನೀಡುವವರಿಲ್ಲ. ಅನಾಹುತ ತಡೆಯುವವರೂ ಇಲ್ಲ’ ಎಂದು ಮಳಖೇಡದ ತೃಪ್ತಿ ಮಿಶ್ರಾ ಬೇಸರ ವ್ಯಕ್ತಪಡಿಸಿದರು.

‘ಜಲಪಾತದ ವೀಕ್ಷಣೆಗೆ ಬರುವ ಮಹಿಳೆಯರಿಗೆ ಶೌಚಾಲಯ, ಡ್ರೆಸ್ಸಿಂಗ್ ರೂಮ್ ವ್ಯವಸ್ಥೆ ಮಾಡಬೇಕು. ರಸ್ತೆಯನ್ನು ಸುಧಾರಿಸಿ ಮಾಹಿತಿ ಫಲಕ ಅಳವಡಿಸುವ ಮೂಲಕ ಪ್ರವಾಸಿಗರಿಗೆ ಮಾಹಿತಿ ನೀಡಬೇಕು. ಇಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು’ ಎಂದು ರಾಯಚೂರಿನ ನಿರ್ಮಲಾ ವೆಂಕಟ್ ಒತ್ತಾಯಿಸಿದರು.

‘ನಮ್ಮ ಊರಿನಲ್ಲಿ ಜಲಪಾತ, ಸುಂದರ ಪರಿಸರವಿದೆ ಎಂದು ಹೆಮ್ಮೆ ಪಟ್ಟಿದ್ದೇವು. ಆದರೆ ಈಗ ಜಲಪಾತ ನಮ್ಮೂರಲ್ಲಿ ಯಾಕಿದೆಯೊ ಅನ್ನುವಂತಾಗಿದೆ. ಜಲಪಾತದ ವೀಕ್ಷಣಾ ಸ್ಥಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅಲ್ಲದೆ ಪ್ರವಾಸಿಗರು ಕುಡಿದು ಬಾಟಲಿಗನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ’ ಎಂದು ಗ್ರಾಮದ ರೈತ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.