ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿ ವಾತಾವರಣ ಕಂಡು ಬರುತ್ತಿದ್ದು, ಸರಾಸರಿಗಿಂತ ಎರಡ್ಮೂರು ತಪಾಮಾನ ಇಳಿಕೆಯಾಗಿದೆ.
ಗರಿಷ್ಠ 28 ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಸಂಜೆ 6 ಗಂಟೆಯಿಂದಲೇ ತಂಪಿನ ಅನುಭವವಾಗುತ್ತಿದ್ದು, ಬೆಳಿಗ್ಗೆ 8 ಗಂಟೆಯಾದರೂ ಸೂರ್ಯ ಪ್ರಖರವಾಗಿ ಕಾಣಿಸುತ್ತಿಲ್ಲ. ಇದರಿಂದ ವೃದ್ಧರು ಸೂರ್ಯನ ಕಿರಣಗಳಿಗಾಗಿ ಮಾಳಿಗೆ ಮೇಲೆ ಹತ್ತಿ ಬಿಸಿಲು ಕಾಯಿಸಿಕೊಳ್ಳುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಇನ್ನೂ ಚಳಿಯಿಂದ ಹಿಂಗಾರು ಹಂಗಾಮಿನ ಜೋಳದ ಬೆಳೆಗೆ ತುಂಬಾ ಅನುಕೂಲವಾಗಿದೆ. ಅಲ್ಲದೇ ಬೆಳಗಿನ ಜಾವದಲ್ಲಿ ಇಬ್ಬನಿಯೂ ಕಾಣಬರುತ್ತಿದೆ. ಇದು ಜೋಳಕ್ಕೆ ಹಿತಕೂಲವಾದ ವಾತಾವರಣ ನಿರ್ಮಾಣವಾಗಿದೆ.
ಜಿಲ್ಲೆಯೂ ಬೆಟ್ಟಗುಡ್ಡಗಳಿಂದ ಕೂಡಿದ್ದು, ಬೆಳಗಿನ ಜಾವ ಮಂಜು ಆವರಿಸಿರುವುದು ಕಂಡು ಬರುತ್ತಿದೆ. ಬೆಟ್ಟಗಳನ್ನು ದೂರದಿಂದ ನೋಡಿದರೆ ಮಂಜಿನ ವಾತಾವರಣ ಆಹ್ಲಾದಕರವಾಗಿದೆ.
ಇಂಥ ಮಂಜಿನ ಹನಿಗಳೊಂದಿಗೆ ಹಾಲು, ಪತ್ರಿಕೆ ಹಾಕುವವರು ಸ್ವೆಟರ್ ಹಾಕಿಕೊಂಡು ತಮ್ಮ ಕಾರ್ಯ ಮುಂದುವರಿಸಿದ್ದಾರೆ. ರಸ್ತೆ ಬದಿಯಲ್ಲಿ ಉಣ್ಣೆಯ ಚಾದರ್ ಮಾರಾಟಕ್ಕೆ ಇಡಲಾಗಿದೆ. ಹಳ್ಳಿಗಳಲ್ಲಿ ಚಳಿಕಾಯಿಸಿಕೊಳ್ಳುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿದೆ.6ರಿಂದ 8 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಥಂಡಿಗೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.