ADVERTISEMENT

ಯಾದಗಿರಿ | ಮುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳ ಸಂತಸ

ಎಸ್ಸೆಸ್ಸೆಲ್ಸಿ: 1,195 ಗೈರು, 447 ಪರೀಕ್ಷೆ ಬರೆದ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 17:10 IST
Last Updated 3 ಜುಲೈ 2020, 17:10 IST
ಯಾದಗಿರಿಯ ಚಿರಂಜೀವಿ ಶಾಲೆಯಲ್ಲಿ ಪರೀಕ್ಷೆ ಮುಗಿದ ನಂತರ ಸಂತಸದಿಂದ ಹೊರ ಬಂದ ವಿದ್ಯಾರ್ಥಿಗಳು
ಯಾದಗಿರಿಯ ಚಿರಂಜೀವಿ ಶಾಲೆಯಲ್ಲಿ ಪರೀಕ್ಷೆ ಮುಗಿದ ನಂತರ ಸಂತಸದಿಂದ ಹೊರ ಬಂದ ವಿದ್ಯಾರ್ಥಿಗಳು   

ಯಾದಗಿರಿ: ಜೂನ್‌ 25ರಂದು ಆರಂಭಗೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜುಲೈ 3ರಂದು ಮುಕ್ತಾಯವಾಗಿದೆ. ಇದರಿಂದ ವಿದ್ಯಾರ್ಥಿಗಳ ಸಂತಸಪಟ್ಟರು.

ಕೊರೊನಾ ಆತಂಕದಲ್ಲಿಯೇ ಪರೀಕ್ಷೆ ನಡೆಯುತ್ತದೋ? ಇಲ್ಲವೋ ಎನ್ನುವ ಗೊಂದಲದಲ್ಲಿ ಜೂನ್‌ 25ರಂದು ನಡೆದ ಪರೀಕ್ಷೆಗೆ ಅಣಿಯಾಗಬೇಕಿತ್ತು. ಆನಂತರ ಒಂದೊಂದು ಪರೀಕ್ಷೆ ನಡೆದಂತೆ ನಿರಾಳವಾಯಿತು.ಲಾಕ್‌ಡೌನ್‌ ವೇಳೆ ಅಭ್ಯಾಸ ಮಾಡಲು ಹೆಚ್ಚಿನ ಸಮಯ ಸಿಕ್ಕಿತು. ಇದರಿಂದ ಚೆನ್ನಾಗಿ ಬರೆಯಲು ಅವಕಾಶವಾಯಿತುಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು.

ಶುಕ್ರವಾರ ಕೊನೆ ಪರೀಕ್ಷೆ ಮುಗಿಸಿ ಹೊರ ಬಂದ ವಿದ್ಯಾರ್ಥಿಗಳಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಹೊರಗೆ ಕಾಯುತ್ತಿದ್ದ ಪಾಲಕರು ಮಕ್ಕಳನ್ನು ಬರಮಾಡಿಕೊಂಡು ತಮ್ಮ ವಾಹನಗಳಲ್ಲಿ ಕರೆದೊಯ್ದರು.

ADVERTISEMENT

ಕೆಲ ಪೋಷಕರು ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲಲ್ಲಿ ಮಕ್ಕಳಿಗೆ ಕೋವಿಡ್‌ ದೃಢಪಟ್ಟಿರುವ ಪ್ರಕರಣಗಳು ನಡೆದಿದ್ದು, ಇದರಿಂದ ಆತಂಕಗೊಳ್ಳುವಂತೆ ಮಾಡಿತ್ತು. ಆದರೂ ಪರೀಕ್ಷೆ ಮುಗಿದಿದ್ದರಿಂದ ಪೋಷಕರು ಪರೀಕ್ಷೆ ಮುಗಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟರು.

ಶುಕ್ರವಾರ ನಡೆದ ತೃತೀಯ ಭಾಷೆ ಪರೀಕ್ಷೆಗೆ 14,711 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. 13, 516 ವಿದ್ಯಾರ್ಥಿಗಳು ಹಾಜರಾಗಿದ್ದು, 1,195 ಮಂದಿ ಗೈರಾಗಿದ್ದರು. ಕಂಟೇನ್ಮೆಂಟ್‌ ಝೋನ್‌ನಿಂದ ಬಂದಿದ್ದ 397 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಬೇರೆ ಜಿಲ್ಲೆಯ 456 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 447 ವಿದ್ಯಾರ್ಥಿಗಳು ಹಾಜರಾಗಿದ್ದರು. 9 ವಿದ್ಯಾರ್ಥಿಗಳು ಗೈರಾಗಿದ್ದರು.

ಅಧಿಕಾರಿಗಳ ಸೇವೆ ಸ್ಮರಣೆ: ‘ಜಿಲ್ಲೆಯಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆಯ 195 ಸ್ಕೌಟರ್, ಗೈಡರ್ ಮತ್ತು ರೋವರ್ ರೇಂಜರ್‌ಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ.ಒಂದು ಕೇಂದ್ರದಲ್ಲಿ ಮೂವರು ಇದ್ದು, ಅಂತರ ಕಾಪಾಡುಕೊಳ್ಳುವುದು, ಸ್ಯಾನಿಟೈಸ್‌, ಮಾಸ್ಕ್‌ ವಿತರಿಸುವುದು ಸೇರಿದಂತೆ ಮಕ್ಕಳಿಗೆ ಅಗತ್ಯ ಸಲಹೆ ನೀಡಿದ್ದಾರೆ. ಇವರ ಜೊತೆಗೆ ಪೊಲೀಸ್‌, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿ, ಜಿಲ್ಲಾಪಂಚಾಯಿತಿ ಅಧಿಕಾರಿಗಳು, ಎನ್‌ಈಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಕಾಲಕ್ಕೆ ಬಸ್‌ ವ್ಯವಸ್ಥೆ ಮಾಡಿದ್ದಾರೆ. ಇವರ ಸೇವೆಯನ್ನು ಸ್ಮರಿಸುವುದಾಗಿ’ ಡಿಡಿಪಿಐ ಶ್ರೀನಿವಾಸರೆಡ್ಡಿ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.