ಕೆಂಭಾವಿ: ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕೃಷ್ಣಾ ಕಾಲುವೆಯ ಪಂಪ್ಹೌಸ್ ಮತ್ತು ಶುದ್ಧೀಕರಣ ಘಟಕಕ್ಕೆ ಮಂಗಳವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರ ಕುಡಿಯುವ ನೀರು ಸರಬರಾಜು ಮಂಡಳಿಯ ಎಇಇ ಶಂಕರಗೌಡ ಮತ್ತು ಕೆಕೆಆರ್ಡಿಬಿ ಎಂಜಿನಿಯರ್ ಸುನಿಲಕುಮಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಇದೇ ವೇಳೆ ಕುಡಿಯುವ ನೀರಿನ ಕಾಮಗಾರಿ ಕುರಿತು ಕೆಕೆಆರ್ಡಿಬಿ ಎಂಜಿನಿಯರ್ಗೆ ಶಂಕರಗೌಡ ಅವರು ಸಮಗ್ರ ಮಾಹಿತಿ ನೀಡಿದರು.
ಶಂಕರಗೌಡ ಮಾತನಾಡಿ, ‘ಈಗಾಗಲೆ ಪಟ್ಟಣಕ್ಕೆ ತಾತ್ಕಾಲಿಕವಾಗಿ ಕಾಲುವೆಯಿಂದ ನೀರನ್ನು ಶುದ್ಧೀಕರಿಸಿ, ಜನರಿಗೆ ನೀರು ಪೂರೈಸಲಾಗುತ್ತಿದೆ. ಈಗ ಕಾಲುವೆಯಲ್ಲಿ ನೀರು ಬಂದ್ ಆಗಿದ್ದರಿಂದ, ಇದನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಅಮೃತ-2 ಯೋಜನೆಯಡಿಯಲ್ಲಿ ನಿರಂತರ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೆ ಶೇ 80ರಷ್ಟು ಕೆಲಸ ಪೂರ್ಣಗೊಂಡಿದೆ. ಕೆಲವು ವಾರ್ಡ್ಗಳಲ್ಲಿ ತಾಂತ್ರಿಕ ಕಾರಣಗಳಿಂದ ನಲ್ಲಿ ಜೋಡಣೆಯ ಕಾರ್ಯ ಸ್ಥಗಿತಗೊಂಡಿದೆ. ಅವುಗಳನ್ನು ಶೀಘ್ರದಲ್ಲೇ ಬಗೆಹರಿಸಿ ಆಗಸ್ಟ್ ತಿಂಗಳ ಅಂತ್ಯದೊಳಗೆ ನಿರಂತರ ನೀರು ಪೂರೈಕೆ ಮಾಡಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
ನಂತರ ಕೆಕೆಆರ್ಡಿಬಿಯಿಂದ ಒದಗಿಸಲಾದ ಅನುದಾನದ ಬಳಕೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸುನಿಲಕುಮಾರ ಅವರು ಕೃಷ್ಣಾ ಕಾಲುವೆಯ ಬಳಿ ಇರುವ ಕಚ್ಚಾ ನೀರಿನ ಪಂಪ್ಹೌಸ್, ಕಾಲುವೆಯಿಂದ ಹಿಲ್ಟಾಪ್ ಕಾಲೋನಿಯವರೆಗೆ ಇರುವ ಪೈಪ್ಲೈನ್, ವಿದ್ಯುತ್ ಘಟಕ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಕಾಮಗಾರಿಗಳನ್ನು ವೀಕ್ಷಿಸಿದರು. ಶಫೀಕ್ ದಫೇದಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.