ADVERTISEMENT

ಕಾರ್ಯ ನಿರ್ವಹಿಸದ ವೆಂಟಿಲೇಟರ್: ಸರ್ಕಾರಿ ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

ಟಿ.ನಾಗೇಂದ್ರ
Published 6 ಮೇ 2021, 13:56 IST
Last Updated 6 ಮೇ 2021, 13:56 IST
ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಯ ಕಟ್ಟಡ
ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಯ ಕಟ್ಟಡ   

ಶಹಾಪುರ: ಕೊರೊನಾ ಅಲೆ ವೇಗವಾಗಿ ಹಬ್ಬುತ್ತಲಿದೆ ಎನ್ನುತ್ತಿರುವ ಆರೋಗ್ಯ ಇಲಾಖೆ ಮಾತ್ರ ಆಮೆಗತಿಯಲ್ಲಿ ಹೆಜ್ಜೆ ಹಾಕುತ್ತಲಿದೆ. ನಗರದ ಸರ್ಕಾರಿ ಮೊದಲ ಮಹಡಿಯಲ್ಲಿ ಕೋವಿಡ್ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಿದೆ. ಇನ್ನೂ ವೆಂಟಿಲೇಟರ್ ಅಳವಡಿಸುವಲ್ಲಿ ಮಗ್ನವಾಗಿದೆ. ಕೋವಿಡ್ ರೋಗಿಗಳಿಗೆ ಯಾವಾಗ ಅದರ ಸೌಲಭ್ಯ ಸಿಗುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಕೋವಿಡ್ ನಿರ್ವಹಣಾ ಕೇಂದ್ರದಲ್ಲಿ 10 ವೆಂಟಲೇಟರ್ ಅಳವಡಿಸಲಾಗಿದೆ. ಕಾರ್ಯ ನಿರ್ವಹಿಸುತ್ತಿರುವುದು ಒಂದು ಮಾತ್ರ. ಇನ್ನೂ ಒಂಬತ್ತು ಅಳವಡಿಕೆಯ ನೆಪದಲ್ಲಿಯೇ ಅಧಿಕಾರಿಗಳು ಕಾಲಹರಣ ಮಾಡುತ್ತಲಿದ್ದಾರೆ. 50 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಆಮ್ಲಜನಕದ ಕೊರತೆಯಿಲ್ಲ. ಆದರೆ ಇನ್ನಿತರ ಅಗತ್ಯ ಔಷಧಿಗಳ ಕೊರತೆ ಆಸ್ಪತ್ರೆ ಎದುರಿಸುತ್ತಲಿದೆ. ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಇಲ್ಲದ ಕಾರಣ ಹೇಳಿ ಬೇರೆಡೆ ಕಳುಹಿಸುತ್ತಿರುವುದು ಸರಿಯಲ್ಲ. ರೋಗದಿಂದ ಸತ್ತ ಮೇಲೆ ಔಷಧಿ ಹಾಗೂ ವೆಂಟಿಲೇಟರ್ ಪೂರೈಯಿಸುತ್ತಾರೆಯೇ ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ ಮಲ್ಲಾಬಾದಿ ಪ್ರಶ್ನಿಸಿದ್ದಾರೆ.

ಆಸ್ಪತ್ರೆಯಲ್ಲಿ ಯಾವುದೇ ಭದ್ರತೆ ಇಲ್ಲವಾಗಿದೆ. ರಾತ್ರಿ ಹಾಗೂ ಬೆಳಿಗ್ಗೆ ಸಮಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತು ಒದಗಿಸಬೇಕು. ನಿರಂತರವಾಗಿ ಕರ್ತವ್ಯ ನಿರ್ವಹಿಸಲು ತಜ್ಞ ವೈದ್ಯರ ತಂಡವನ್ನು ನಿಯೋಜಿಸಬೇಕು. ಮಾನಸಿಕವಾಗಿ ಜರ್ಜಿತರಾಗಿರುವ ಜನತೆಗೆ ಸಾಂತ್ವನ ಹಾಗೂ ಧೈರ್ಯ ತುಂಬುವ ಕೆಲಸ ಸಾಗಬೇಕು. ಕಾಳಸಂತೆಯಲ್ಲಿ ಔಷಧಿ ಮಾರಾಟವಾಗದಂತೆ ತಡೆಯಲು ಸಾಕಷ್ಟು ಔಷಧಿ ಸರಬರಾಜು ಮಾಡಬೇಕು ಎಂದು ನಗರದ ಜನತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ADVERTISEMENT

ತಾಲ್ಲೂಕು ಆಸ್ಪತ್ರೆಯಲ್ಲಿ ಐದು ವೆಂಟಿಲೇಟರ್ ಸೌಲಭ್ಯವಿದೆ. ಇನ್ನೂ 5 ವೆಂಟಿಲೇಟರ್ ಸಿದ್ಧಪಡಿಸಲಾಗುತ್ತಿದೆ. 50 ಹಾಸಿಗೆ ವ್ಯವಸ್ಥೆ ಮಾಡಿದೆ. ಗುರುವಾರ 50 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನದಲ್ಲಿ 4 ಜನ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. 25 ಸಾವಿರ ಜನರಿಗೆ ಮೊದಲ ಲಸಿಕೆ ಹಾಕಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರಿಗೆ ಊಟ, ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ,ರಮೇಶ ಗುತ್ತೆದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.