ಯಾದಗಿರಿ: ರಾಜ್ಯದ ಜನರ ಬದುಕಿಗೆ ಶಾಪವಾಗಿ ಪರಿಣಮಿಸಿ ಜನನ ಮರಣ ಪ್ರಮಾಣ ಪತ್ರದಿಂದ ಹಿಡಿದು ಪ್ರತಿ ಟೆಂಡರ್ನಲ್ಲೂ ಕಮಿಷನ್ ದಂಧೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಸಂಪೂರ್ಣ ಭ್ರಷ್ಟಾಚಾರವೇ ಈ ಸರ್ಕಾರದ ಸಾಧನೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹೇಳಿದರು.
‘ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯೇ ತನ್ನ ಅಜೆಂಡಾವಾಗಿ ಇಟ್ಟುಕೊಂಡಿದೆ. ಭ್ರಷ್ಟಾಚಾರವೇ ಮೂಲ ಧ್ಯೇಯೋಧ್ಯೇಶದೊಂದಿಗೆ ಜಾತಿ ಜಾತಿಯಲ್ಲಿ ಬೆಂಕಿ ಹಚ್ಚುತ್ತಿದೆ. ಅಭಿವೃದ್ಧಿ ವಿಷಯ ಇಲ್ಲದೇ ಭಂಡ ಅಧಿಕಾರ ನಡೆಸುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ದೇಶವು ಪ್ರಸ್ತುತ ಯುದ್ಧದ ಸನ್ನಿವೇಶದಲ್ಲಿದ್ದರೂ ಹೊಸಪೇಟೆಯಲ್ಲಿ ಗ್ಯಾರಂಟಿ ವಿಜಯೋತ್ಸವ ಮಾಡುವುದು ಎಷ್ಟು ಸರಿ ಮತ್ತು ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಏರ್ಪಡಿಸಲಾಗಿದೆ’ ಎಂದು ಪ್ರಶ್ನಿಸಿದರು.
‘ರಾಜ್ಯದ ಅಮಾಯಕ ಜನರಿಗೆ ಅವೈಜ್ಞಾನಿಕ ಗ್ಯಾರಂಟಿಯಿಂದಾಗಿ ಮೂಲ ಸೌಕರ್ಯಗಳನ್ನು ಒದಗಿಸದೇ ಸುಳ್ಳು ಭರವಸೆಯೇ ಮೂಲ ಮಂತ್ರವಾಗಿರಿಸಿಕೊಂಡ ಏಕೈಕ ಸರ್ಕಾರ ಕಾಂಗ್ರೆಸ್ ಆಗಿದೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಮುಡಾ ನಿವೇಶನ ಹಗರಣ, ವಾಲ್ಮೀಕಿ ಸಮುದಾಯದ ವಂಚನೆ, ಎಸ್ಸಿ, ಎಸ್ಟಿ, ಸಮುದಾಯಕ್ಕೆ ಮೀಸಲಾದ ಎಸ್ಸಿ, ಎಸ್ಪಿ, ಟಿಎಸ್ಪಿ ನಿಧಿ ಕೊಳ್ಳೆ ಹೊಡೆದದ್ದು, ಮುಸ್ಲಿಂ ಓಲೈಕೆ, ಹಿಂದೂ ಕಾರ್ಯಕರ್ತರ ಕೊಲೆ, ಮಹಿಳೆಯರ ಮೇಲೆ ಅತ್ಯಾಚಾರಗಳು, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು, ಕೋಮು ಗಲಭೆಗಳು ಹೀಗೆ ಇನ್ನಿತರ ಹತ್ತು ಹಲವು ಭ್ರಷ್ಟಚಾರಗಳನ್ನು, ದೋಷಗಳನ್ನು ಹೊತ್ತು ಕಳೆದ ಎರಡು ವರ್ಷಗಳಿಂದ ಎಂದೂ ಕಾಣದ ದುಸ್ಥಿತಿ ಇಂದು ರಾಜ್ಯದ ಜನತೆ ಅನುಭವಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಬಿಜೆಪಿ ಯುವ ಮುಖಂಡ ಮಹೇಶ ರೆಡ್ಡಿಗೌಡ ಮುದ್ನಾಳ, ಹಿರಿಯ ಮುಖಂಡ ದೇವಿಂದ್ರನಾಥ್ ನಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಕಾಮಾ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಜಿಲ್ಲಾ ಬಿಜೆಪಿ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೆಸೂರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.