ಕೆಂಭಾವಿ: ಹತ್ತಿ ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರೂ ಮಳೆಯಾಧಾರಿತ ಕೆಲವು ಭಾಗಗಳಲ್ಲಿ ರೈತರು ಅಲ್ಪ ಸ್ವಲ್ಪ ಹತ್ತಿ ಬೆಳೆದಿದ್ದರು. ಆದರೆ ಕಳೆದ ಒಂದು ವಾರದಿಂದ ಧಾರಣೆ ಕಡಿಮೆಯಾಗಿದ್ದು ಅನಿವಾರ್ಯವಾಗಿ ಹತ್ತಿ ಮೂಟೆಗಳನ್ನು ತಮ್ಮ ಜಮೀನುಗಳಲ್ಲಿ ಇಟ್ಟು ಕಾಯುವ ಪರಿಸ್ಥಿತಿ ಎದುರಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಪ್ರತಿ ಕ್ವಿಂಟಲ್ಗೆ ₹8 ಸಾವಿರಕ್ಕೂ ಹೆಚ್ಚಿದ ಹತ್ತಿ ಬೆಲೆ ₹7 ಸಾವಿರಕ್ಕಿಂತಲೂ ಕಡಿಮೆಯಾಗಿದೆ. ಇದರಿಂದ ಅಧಿಕ ಖರ್ಚು ಮಾಡಿ ಹತ್ತಿ ಬೆಳೆದ ರೈತರು ನಷ್ಟದ ಆತಂಕದಲ್ಲಿದ್ದಾರೆ.
‘ಈ ವರ್ಷ ಮಳೆಯ ಕೊರತೆಯಿಂದ ಹಲವೆಡೆ ಇಳುವಿರಿ ನೆಲಕಚ್ಚಿದ್ದು ಒಂದೆಡೆಯಾದರೆ ದರ ಇಳಿಕೆ ಗಾಯದ ಮೇಲೆ ಬರೆಯೆಳೆದಂತಾಗಿದೆ. ಹಾಕಿದ ದುಡ್ಡು ಕೈಗೆ ಬರುವುದು ಅನುಮಾನವಾಗಿದೆ’ ಎನ್ನುತ್ತಾರೆ ರೈತ ಗಿರಿಮಲ್ಲ.
ಈ ಬಾರಿ ಹತ್ತಿ ವಹಿವಾಟು ಕಡಿಮೆ ಇದ್ದು ಬೆಲೆ ಏರಿಕೆಯಾಗುತ್ತದೆ ಎಂಬ ರೈತರ ಕನಸು ಹುಸಿಯಾಗಿದ್ದು ವ್ಯಾಪಾರಸ್ಥರ ಕೈಚಳಕದಿಂದ ಬೆಲೆ ಸಂಪೂರ್ಣ ಕುಸಿದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಶಹಾಪುರ ಭಾಗದಲ್ಲಿ ಹಲವು ಹತ್ತಿ ಕಾರ್ಖಾನೆಗಳು ಇದ್ದು ಕಾರ್ಖಾನೆ ಮಾಲೀಕರು ರೈತರಿಂದ ನೇರವಾಗಿ ಹತ್ತಿ ಖರೀದಿಸುವಂತೆ ಸರ್ಕಾರ ನಿಯಮ ಮಾಡಬೇಕು. ಪ್ರತಿ ಕ್ವಿಂಟಲ್ ಹತ್ತಿಗೆ ₹10 ಸಾವಿರ ಬೆಲೆ ನಿಗದಿ ಮಾಡಬೇಕು. ಮಧ್ಯವರ್ತಿಗಳ ಹಾವಳಿ ತಡಟ್ಟಬೇಕು ಎಂಬುದು ರೈತರ ಒತ್ತಾಸೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.