ಕಕ್ಕೇರಾ: ಸಮೀಪದ ಬಂಡೊಳ್ಳಿ ಕ್ರಾಸ್ನಲ್ಲಿರುವ ಕೋವಿಡ್ ಪರೀಕ್ಷಾ ಚೆಕ್ಪೋಸ್ಟ್ಗೆ ಮಂಗಳವಾರ ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಭೇಟಿ ನೀಡಿ, ಬೆಂಗಳೂರಿನಿಂದ ಬರುತ್ತಿರುವ ಕಾರ್ಮಿಕರಿಗೆ ಕೋವಿಡ್ ಪರೀಕ್ಷೆಯನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ತಹಶೀಲ್ದಾರ್, ‘ಕೊರೊನಾ 2ನೇ ಅಲೆ ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಮಂಗಳವಾರ ರಾತ್ರಿಯಿಂದ 14 ದಿನ ಜನತಾ ಕರ್ಫ್ಯೂ ಘೋಷಿಸಲಾಗಿದೆ. ಬೆಂಗಳೂರಿನಿಂದ ಸರ್ಕಾರಿ ಹಾಗೂ ಖಾಸಗಿ ಬಸ್, ಕ್ರೂಸರ್, ಇತರ ವಾಹನಗಳಲ್ಲಿ ಆಗಮಿಸುವ ಕಾರ್ಮಿಕರನ್ನು ತಡೆದು ಕೋವಿಡ್ ಪರೀಕ್ಷೆ ಮಾಡಿ ಅವರುಗಳ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತಿದೆ’ ಎಂದು ತಿಳಿಸಿದರು.
‘ಕೋವಿಡ್ ಪರೀಕ್ಷಿಸಿಕೊಂಡವರ ಪೋನ್ ನಂಬರ್ಗೆ ಪರೀಕ್ಷಾ ವರದಿ 2 ದಿನಗಳ ನಂತರ ಬರಲಿದೆ. ಒಂದು ವೇಳೆ ಕೋವಿಡ್ ಪಾಸಿಟಿವ್ ಬಂದಲ್ಲಿ ಅವರನ್ನು ಹೋಂ ಕ್ವಾರಂಟೈನ್
ಅಥವಾ ಕೋವಿಡ್ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ’ ಎಂದು ಹೇಳಿದರು.
ಕಂದಾಯ ನಿರೀಕ್ಷಕ ವಿಠಲ್ ಬಂದಾಳ್, ತಿಂಥಣಿ ಗ್ರಾಮ ಲೆಕ್ಕಿಗ ಶಿವುಕುಮಾರ, ಪರೀಕ್ಷಾ ಕೇಂದ್ರದ ಲ್ಯಾಬ್ ಟೆಕ್ನಿಶಿಯನ್ ಕಾರ್ತಿಕ್ ಗಂಗಾವತಿ, ಆರೋಗ್ಯ ಸಿಬ್ಬಂದಿ ಶರಣಗೌಡ ಪಾಟೀಲ ಹಾಗೂ ಸುರಪುರ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.