ಶಹಾಪುರ: ರಾಜ್ಯ ಬಿಜೆಪಿ ಸರ್ಕಾರ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿತಗೊಂಡಿದ್ದರಿಂದ ಜನರ ದಿಕ್ಕು ತಪ್ಪಿಸಲು ಆಜಾನ್ ವಿವಾದವನ್ನು ಮುನ್ನೆಲೆಗೆ ತರುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬೆಲೆ ಏರಿಕೆ ಖಂಡಿಸಿ ಸಿಪಿಎಂ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷ ಕಳೆದರೂ ರೈತರ, ಬಡವರ ಬದುಕು ಹಸನಾಗಲಿಲ್ಲ. ಪ್ರೆಟ್ರೋಲ್ , ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ಹಾಗೂ ಜೀವನಾವಶ್ಯಕ ವಸ್ತುಗಳಾದ ಎಣ್ಣೆ , ಆಹಾರ, ಧಾನ್ಯ ಔಷಧ ಬೆಲೆ ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಕಲಿ ಬೀಜ ಮಾರಾಟದ ಹಾವಳಿ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ಸೇತುಮಾಧವ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಚೆನ್ನಪ್ಪ ಆನೆಗುಂದಿ, ದಾವಲಸಾಬ್ ನದಾಫ್, ಎಸ್.ಎಂ.ಸಾಗರ್, ಜೈಲಾಲ್ ತೋಟದಮನಿ, ಗುಲಾಮ್ ಸಾಬ್, ವಿಜಯ ರಾಠೋಡ್, ಭೀಮಣ್ಣ ಬಾಣತಿಹಾಳ, ಅಂಬಲಯ್ಯ ಬಾಣತಿಹಾಳ್, ಸುನಂದಾ ಹಿರೇಮಠ, ಹಣಮಂತಿ ಮೌರ್ಯ,ಮಂಜುಳಾ ಹೊಸ್ಮನಿ, ರಂಗಮ್ಮ ಕಟ್ಟಿಮನಿ, ಬಸಲಿಂಗಮ್ಮ ನಾಟೇಕರ್, ಯಮನಮ್ಮ ದೋರನಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.