ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಲು ಜಿಲ್ಲಾಡಳಿತ ಸಜ್ಜಾಗಿದ್ದು, ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂತು.
ಶನಿವಾರ, ಭಾನುವಾರ ತರಕಾರಿ ಮಾರುಕಟ್ಟೆಗಳಲ್ಲಿ ಜನ ಸಂಚಾರ ಎಂದಿಗಿಂತ ಹೆಚ್ಚು ಇತ್ತು. ಕೆಲವರು ಮಾಸ್ಕ್ ಧರಿಸಿದ್ದು, ಇನ್ನೂ ಕೆಲವರು ಮಾಸ್ಕ್ ಧರಿಸದೆ ಹಾಗೇ ತಿರುಗಾಡುತ್ತಿದ್ದರು.
ಅಂತರ ಮಾಯ: ಸರ್ಕಾರ, ಜಿಲ್ಲಾಡಳಿತ ಅಂತರ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾರ್ಗಸೂಚಿ ಪಾಲಿಸುತ್ತಿಲ್ಲ. ಇದರಿಂದ ಯಾರಿಗೆ ಎಲ್ಲಿ ಕೊರೊನಾ ಬರುತ್ತದೋ ಎನ್ನುವ ಸಂಶಯ ಕಾಡುತ್ತಿದೆ.
ವ್ಯಾಪಾರಸ್ಥರಿಂದ ನಿಯಮ ಉಲ್ಲಂಘನೆ:
ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಮತ್ತು ಮಾಸ್ಕ್ ಧರಿಸಬೇಕು ಎನ್ನುವ ನಿಯಮವಿದೆ. ಆದರೆ, ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ದಿನಸಿ, ತರಕಾರಿ, ಮಾಂಸ ಮಾರಾಟ ಮಳಿಗೆಗಳಲ್ಲಿ ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆರಂಭದ ಕೆಲ ದಿನ ಮಾತ್ರ ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸಿ ದಂಡ ವಿಧಿಸಿದರು. ನಂತರದ ದಿನಗಳಲ್ಲಿ ಮತ್ತೆ ಯಥಾಪ್ರಕಾರ ನಿಯಮ ಉಲ್ಲಂಘನೆ ಸಾಮಾನ್ಯವಾಗಿದೆ.
ತಳ್ಳುಗಾಡಿ ವ್ಯಾಪಾರಿಗಳು ಮಾಸ್ಕ್ ಧರಿಸದೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದು ಮಾರುಕಟ್ಟೆಯಲ್ಲಿ ಕಾಣ
ಬರುತ್ತಿದೆ.
‘ಅವಶ್ಯ ವಸ್ತುಗಳ ಖರೀದಿಗೆ ಸರ್ಕಾರ ಸಮಯ ನಿಗದಿ ಪಡಿಸಿದೆ. ಆದರೆ, ಜನರು ಕೊರೊನಾ ನಿಯಮ ಪಾಲನೆ ಮಾಡುತ್ತಿಲ್ಲ. ಇದರಿಂದ ದಂಡ ವಿಧಿಸಿದರೆ ಹೆಚ್ಚು ದಂಡ ಎನ್ನುತ್ತಾರೆ. ಹೀಗಾಗಿ ಜನರೇ ಅರ್ಥ ಮಾಡಿಕೊಳ್ಳಬೇಕು’ ಎನ್ನುತ್ತಾರೆ ನಗರಸಭೆ ಅಧಿಕಾರಿಯೊಬ್ಬರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.