ADVERTISEMENT

ಶೇ 100 ರಷ್ಟು ಲಸಿಕಾಕರಣ ಗುರಿ ತಲುಪಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 13:49 IST
Last Updated 29 ಜನವರಿ 2022, 13:49 IST
ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ ಯಾದಗಿರಿ
ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ ಯಾದಗಿರಿ   

ಯಾದಗಿರಿ: ಅಧಿಕಾರಿಗಳು ತಮ್ಮ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮನೆ- ಮನೆಗೆ ತೆರಳಿ ಲಸಿಕಾಕರಣಕ್ಕೆ ಜನರನ್ನು ಮನವೊಲಿಸಬೇಕು. ಎರಡನೇ ಡೋಸ್ ಲಸಿಕೆಯ ತೀವ್ರಗತಿಯಲ್ಲಿ ಪ್ರಗತಿ ಸಾಧಿಸಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆನ್‌ಲೈನ್‌ನಲ್ಲಿ ನಡೆದ ಲಸಿಕಾಕರಣ ಸಭೆ ನಡೆಸಿ ಅವರು ಮಾತನಾಡಿದರು.

ಬೆಳಿಗ್ಗೆ 6 ಗಂಟೆಯಿಂದಲೇ ಲಸಿಕಾಕರಣ ಪ್ರಾರಂಭಿಸಿ ಶೇಕಡ ನೂರರಷ್ಟು ಲಸಿಕಾ ನೀಡಿಕೆ ಗುರಿ ತಲುಪಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಕೋವಿಡ್ ತಡೆಗಟ್ಟಲು ಸತತವಾಗಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಅನೇಕ ಹಳ್ಳಿಯಲ್ಲಿ ತಪ್ಪುಕಲ್ಪನೆಗಳಿಂದ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆಯು ಸುರಕ್ಷಿತ ಎಂಬುದು ಸಾಬೀತಾಗಿದೆ ಎಂದು ಅಧಿಕಾರಿಗಳು ಜನರಿಗೆ ಮನವೊಲಿಸಿ ಎಂದರು.

ADVERTISEMENT

ಜಿಲ್ಲೆಯಲ್ಲಿ ಒಟ್ಟು 8.39 ಲಕ್ಷ ಅರ್ಹ ಫಲಾನುಭವಿಗಳು ಲಸಿಕಾಕರಣಕ್ಕೆ ಅರ್ಹವಿದ್ದು, ಇದರಲ್ಲಿ 8.36 ಲಕ್ಷ ಜನರಿಗೆ ಮೊದಲನೆ ಡೋಸ್ ಲಸಿಕೆ ನೀಡಿ ಶೇಕಡಾವಾರು 99ರಷ್ಟು ಗುರಿ ತಲುಪಲಾಗಿದೆ. 6.76 ಲಕ್ಷ ಜನರಿಗೆ ಎರಡನೇ ಲಸಿಕೆ ನೀಡಲಾಗಿದೆ ಎಂದರು.

ಎರಡನೇ ಡೋಸ್ ಲಸಿಕೆ ಪಡೆಯಲು 1 ಲಕ್ಷ ಅರ್ಹ ಫಲಾನುಭವಿಗಳು ಬಾಕಿಯಿದ್ದು, ಲಸಿಕಾಮೇಳದಲ್ಲಿ ಶೇಕಡಾವಾರು ನೂರರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ, ಆರ್‌ಸಿಎಚ್‌ಒ ಡಾ.ಲಕ್ಷ್ಮೀಕಾಂತ ಒಂಟಿಪೀರ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.