ಯಾದಗಿರಿ: ‘ಗುರುಮಠಕಲ್ ಮತಕ್ಷೇತ್ರದ ಕಡೇಚೂರು, ಬಾಡಿಯಾಳ ಸಮೀಪ 3,003 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಕಳೆದ ವರ್ಷ ಹೊರಡಿಸಲಾದ ಅಧಿಸೂಚನೆ ವಾಪಸ್ ಪಡೆಯಲು ಚಿಂತನೆ ನಡೆಸಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಗುರುವಾರ ಬೆಂಗಳೂರಿನಲ್ಲಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಜತೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಈಗಾಗಲೇ ಕಡೇಚೂರು ಭಾಗದಲ್ಲಿ 3,300 ಎಕರೆ ಸರ್ಕಾರ ಭೂಮಿ ಸ್ವಾಧೀನ ಪಡಿಸಿಕೊಂಡು ಸಾಕಷ್ಟು ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಯುವಕರಿಗೆ ಮತ್ತಷ್ಟು ಉದ್ಯೋಗಕವಾಶಗಳು ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ ಹೆಚ್ಚುವರಿ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿತ್ತು ಎಂದರು.
ಶಾಸಕ ಕಂದಕೂರ ಮಾತನಾಡಿ, ಉದ್ದೇಶಿತ 3,003 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡರೆ, ಕಡೇಚೂರು, ಶೆಟ್ಟಿಹಳ್ಳಿ, ದದ್ದಲ್ ಹಾಗೂ ರಾಚನಹಳ್ಳಿ ಗ್ರಾಮಗಳನ್ನು ಜನ ಸಂಪೂರ್ಣವಾಗಿ ತೊರೆಯುವ ಭೀತಿ ಎದುರಾಗಿದೆ. ಸಾವಿರಾರು ವರ್ಷಗಳಿಂದ ಗ್ರಾಮಗಳಲ್ಲಿನ ಜನತೆ ತಮ್ಮ ಭೂಮಿಯೊಂದಿಗೆ ಭಾವನೆಗಳನ್ನೂ ಹೊಸೆದು ಜೀವನ ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿದರು.ಕಳೆದೊಂದು ದಶಕದ ಹಿಂದೆ ಸರ್ಕಾರ 3,300 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದ ವೇಳೆ, ನಮ್ಮ ಭಾಗ ಅಭಿವೃದ್ಧಿಯಾಗುತ್ತದೆ ಎಂದು ರೈತರು ಹೃದಯವೈಶಾಲ್ಯತೆ ಮೆರೆದು ತಮ್ಮ ಭೂಮಿ ಬಿಟ್ಟುಕೊಟ್ಟಿದ್ದರು. ಆದರೆ, ಅವರ ನಿರೀಕ್ಷೆಯಂತೆ ಸರ್ಕಾರ ಅಲ್ಲಿ ಇನ್ನೂ ಕೈಗಾರಿಕಾ ವಲಯ ಸ್ಥಾಪನೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತೊಡಿಸಿದರು.
ಪರಿಸ್ಥಿತಿ ಹೀಗಿರುವಾಗ ಮತ್ತೊಮ್ಮೆ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಅಲ್ಲದೆ ಅಧಿಸೂಚನೆ ಹೊರಡಿಸಿ, ಸುಮ್ಮನಾಗಿದೆ. ಇದರಿಂದ ರೈತರು ತಮ್ಮ ಭೂಮಿ ಮಾರಾಟ ಮಾಡಲೂ ಆಗದೆ ತೊಂದರೆಯಲ್ಲಿದ್ದಾರೆ ಎಂದು ಹೇಳಿದರು. ಈ ಬಗ್ಗೆ ಮತ್ತೊಮ್ಮೆ ಸಮಗ್ರ ಪರಿಶೀಲನೆ ನಡೆಸಿ, ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರಿಗೆ ಸಚಿವ ನಿರಾಣಿ ಭರವಸೆ
ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.