ADVERTISEMENT

ಯಾದಗಿರಿ ಜಿಲ್ಲೆಯಲ್ಲಿ 57 ಡೆಂಗಿ ಪ್ರಕರಣ ಪತ್ತೆ

ಯಾದಗಿರಿಯಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು, ಸುರಪುರದಲ್ಲಿ ಕಡಿಮೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 19:31 IST
Last Updated 17 ಮೇ 2019, 19:31 IST
ಡಾ.ಹಬೀಬ್ ಉಸ್ಮಾನ್ ಪಟೇಲ್, ಡಿಎಚ್ಒ
ಡಾ.ಹಬೀಬ್ ಉಸ್ಮಾನ್ ಪಟೇಲ್, ಡಿಎಚ್ಒ   

ಯಾದಗಿರಿ: ಜಾಗೃತಿ, ಆಂದೋಲನ ಮಧ್ಯೆಯೂ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 57 ಡೆಂಗಿ ಪ್ರಕರಣಗಳು ಪತ್ತೆಯಾಗಿದೆ.

2019ರಲ್ಲಿ ಜಿಲ್ಲೆಯ ಯಾದಗಿರಿ 34, ಶಹಾಪುರ 16, ಸುರಪುರ 7 ಡೆಂಗಿ ಪ್ರಕರಣಗಳು ದಾಖಲಾಗಿವೆ.

ಡೆಂಗಿ ರೋಗ ವೈರಾಣುವಿನಿಂದ ಬರುವ ಕಾಯಿಲೆಯಾಗಿದೆ. ಇವು ‘ಈಡೀಸ್’ ಜಾತಿಯ ಸೋಂಕಿತ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಡೆಂಗಿ ಮಾರಕವಾದ ಕಾಯಿಲೆಯಾಗಿದೆ.

ADVERTISEMENT

ನಗರದಲ್ಲಿ ಎರಡು, ಮೂರು ದಿನಕ್ಕೊಮ್ಮೆ ನೀರಿನ ಸರಬರಾಜು ಅಗುವುದುರಿಂದ ನೀರು ಶೇಖರಣೆಯೂ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಚರಂಡಿ ಹರಿಯದೇ ನಿಂತಲ್ಲೆ ನಿಲ್ಲುವುದು, ನೀರಿನ ತೊಟ್ಟಿ, ಬ್ಯಾರಲ್, ಟೈಯರ್, ತೆಂಗಿನ ಚಿಪ್ಪು, ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡುವುದರಿಂದ ಕೂಡ ಡೆಂಗಿ, ಚಿಕೂನ್‌ ಗುನ್ಯಾದಂತ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ.


ತಿಳಿವಳಿಕೆ ಕೊರತೆ: ‘ಜಿಲ್ಲೆಯಲ್ಲಿ ಅನಕ್ಷರತೆ ಹೆಚ್ಚು ಇರುವುದರಿಂದ ತಿಳಿವಳಿಕೆ ಕೊರತೆ ಕಡಿಮೆ. ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರೂ ನಿರ್ಲಕ್ಷ್ಯಿಸುವುದರಿಂದ ರೋಗ ಹೆಚ್ಚಳವಾಗುತ್ತಿದೆ. ಭಿತ್ತಿ ಪತ್ರ, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಿರಿಯ ಸಹಾಯಕಿಯರಿಂದ ಈ ಬಗ್ಗೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದರೂ ಜನತೆ ಜಾಗೃತಿಗೊಳ್ಳುತ್ತಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹಬೀಬ್ ಉಸ್ಮಾನ್ ಪಟೇಲ್ ಅಭಿಪ್ರಾಯಪಡುತ್ತಾರೆ.

ಜಿಲ್ಲೆಯಲ್ಲಿರುವ 1000 ಆಶಾ ಕಾರ್ಯಕರ್ತೆಯರು, 265 ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರು ಗ್ರಾಮಗಳಲ್ಲಿ ಈ ಜ್ವರದ ಬಗ್ಗೆ ಜಾಗೃತಿ, ತಿಳಿವಳಿಕೆ ಮೂಡಿಸಿದ್ದಾರೆ. ಆದರೂ ಜನತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಸಾರ್ವಜನಿಕ ಆರೋಗ್ಯ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಡೆಂಗಿ ಪ್ರಕರಣಗಳನ್ನು ನಿಖರವಾಗಿದೆ ಪತ್ತೆ ಮಾಡಲಾಗುತ್ತಿದೆ. ಖಾಸಗಿ ಪ್ರಯೋಗಾಲಯಗಳು ಡೆಂಗಿ ಜ್ವರ ಪತ್ತೆ ಹಚ್ಚಲು ₹250 ಗಳಿಗಿಂತ ಹೆಚ್ಚು ಶುಲ್ಕ ಪಡೆಯಬಾರದು ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೂರ್ಯಪ್ರಕಾಶ್ ಎಂ. ಕಂದಕೂರ.

ಚಿತ್ತಾಪುರ ತಾಲೂಕಿನರೋಗಿಯೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದು, ರೋಗ ಪತ್ತೆಯಾಗಿದೆ. ಈ ಪ್ರಕರಣ ಕಲಬುರ್ಗಿ ಜಿಲ್ಲಾ ವ್ಯಾಪ್ತಿಗೆ ಬರುವುದರಿಂದ ಇಲ್ಲಿಯ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

ಡೆಂಗಿ ಲಕ್ಷಣಗಳು: ಡೆಂಗಿ ಜ್ವರ–ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಡೆಂಗಿ ರಕ್ತಸ್ರಾವ ಜ್ವರ: ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತ ಸ್ರಾವದ ಗುರುತುಗಳು, ವಿಪರೀತ ಬಾಯಾರಿಕೆ, ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವ ತಕ್ಷಣಗಳು ಕಾಣಿಸಿಕೊಳ್ಳುತ್ತವೆ.

ರೋಗದ ನಿಯಂತ್ರಣ: ನೀರಿನ ತೊಟ್ಟಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಚೆನ್ನಾಗಿ ಉಜ್ಜಿ ತೊಳೆದು ಮುಚ್ಚಳದಿಂದ ಮುಚ್ಚಬೇಕು. ಬಯಲಿನಲ್ಲಿ ಟೈಯರ್‌ಗಳನ್ನು ಬಿಸಾಡದೆ ಶೀಘ್ರ ವಿಲೇವಾರಿ ಮಾಡಬೇಕು. ಸ್ವಯಂ ರಕ್ಷಣಾ ವಿಧಾನ ಅನುಸರಿಸುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.