ADVERTISEMENT

ಗುರುಮಠಕಲ್‌ ಪುರಸಭೆ ಸದಸ್ಯರ ಅನರ್ಹತೆ: ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 3:01 IST
Last Updated 9 ಸೆಪ್ಟೆಂಬರ್ 2021, 3:01 IST

ಗುರುಮಠಕಲ್: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆಂಬ ದೂರಿನಲ್ಲಿ ಕಾಂಗ್ರೆಸ್‌ನ ಮೂವರು ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದ ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್‌ನ ಕಲಬುರ್ಗಿ ಪೀಠ ತಡೆಯಾಜ್ಞೆ ನೀಡಿದೆ.

ಸದಸ್ಯೆ ಪವಿತ್ರಾ ಮನ್ನೆ ಅವರಿಗೆ ಚುನಾವಣೆಯ ದಿನವೇ ಹೆರಿಗೆಯಾಗಿದ್ದು, ಅಶೋಕಕುಮಾರ ಹಾಗೂ ಆಶನ್ನ ಬುದ್ಧ ಅವರು ಕೋವಿಡ್‌ ಕಾರಣ ಕ್ವಾರಂಟೈನ್‌ನಲ್ಲಿ ಇದ್ದ ಕುರಿತು ಜಿಲ್ಲಾಧಿಕಾರಿಗೆ ಸೂಕ್ತ ದಾಖಲೆಗಳನ್ನು ಒದಗಿಸಿದರೂ ಪರಿಗಣಿಸಿಲ್ಲ ಎಂದು ಹೈಕೋರ್ಟ್‌ನ ಮೊರೆಹೋಗಿದ್ದ ಮೂವರ ಮೇಲ್ಮನವಿಯನ್ನು ಆಲಿಸಿದ ಹೈಕೋರ್ಟ್ ಸೋಮವಾರ ಈ ಆದೇಶ ನೀಡಿದೆ.

‘ಜಿಲ್ಲಾಧಿಕಾರಿ ವಿಚಾರಣೆಯ ಸಮಯದಲ್ಲಿಯೂ ನಾವು ಚುನಾವಣೆಗೆ ಮೂವರು ಗೈರಾದ ಕಾರಣದ ದಾಖಲೆಗಳನ್ನು ನೀಡಿದ್ದೆವು. ಆದರೆ, ತೀರ್ಪು ನಮಗೆ ವಿರುದ್ಧವಾಗಿತ್ತು. ಆದ್ದರಿಂದ ಹೈಕೋರ್ಟ್‌ನ ಕಲಬುರ್ಗಿ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನಮ್ಮ ವಿರುದ್ಧದ ಅನರ್ಹತೆಯ ಆದೇಶಕ್ಕೆ ಸೋಮವಾರ ತಡೆಯಾಜ್ಞೆ ನೀಡಿದ್ದಾರೆ. ಮಂಗಳವಾರ ನಮಗೆ ತಡೆಯಾಜ್ಞೆಯ ಆದೇಶ ಪ್ರತಿ ಸಿಕ್ಕಿದ್ದು ಪುರಸಭೆಯಲ್ಲಿ ಅದನ್ನು ನೀಡಿದ್ದೇವೆ’ ಎಂದು ಅಶೋಕಕುಮಾರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.