ADVERTISEMENT

‘ರಾಜ್ಯದ ಮಾದರಿ ನ್ಯಾಯಾಲಯವಾಗಲಿ’

ಜಿಲ್ಲಾ ಕೋರ್ಟ್ ಸಂಕೀರ್ಣ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 5:57 IST
Last Updated 25 ಡಿಸೆಂಬರ್ 2020, 5:57 IST
ಯಾದಗಿರಿ ನಗರದಲ್ಲಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಕಟ್ಟಡ ಕಾಮಗಾರಿಯ ಭೂಮಿಪೂಜೆಯನ್ನು ಹೈಕೋರ್ಟ್ ನ್ಯಾಯಾಧೀಶರಾದ ಪಿ.ಎಸ್.ದಿನೇಶಕುಮಾರ ನೆರವೇರಿಸಿದರು
ಯಾದಗಿರಿ ನಗರದಲ್ಲಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಕಟ್ಟಡ ಕಾಮಗಾರಿಯ ಭೂಮಿಪೂಜೆಯನ್ನು ಹೈಕೋರ್ಟ್ ನ್ಯಾಯಾಧೀಶರಾದ ಪಿ.ಎಸ್.ದಿನೇಶಕುಮಾರ ನೆರವೇರಿಸಿದರು   

ಯಾದಗಿರಿ: ಬಹುದಿನಗಳ ನಿರೀಕ್ಷೆಯಂತೆ ಜಿಲ್ಲಾ ಪ್ರಧಾನ ನ್ಯಾಯಾಲಯ ಹಾಗೂ ನ್ಯಾಯಾಲಯಗಳ ಸಂಕೀರ್ಣ ಮತ್ತು ಬಾರ್ ಅಸೋಸಿಯೇಶನ್ ಕಚೇರಿಗಳ ಕಟ್ಟಡ ಕಾಮಗಾರಿಯ ಶಿಲಾನ್ಯಾಸ ಜರುಗುತ್ತಿರುವುದು ಸಂತಸದ ವಿಷಯ. ಕೇವಲ ಮಾದರಿ ಕಟ್ಟಡವಾಗಿ ಮಾತ್ರವಲ್ಲದೆ ನ್ಯಾಯದಾನದಲ್ಲಿಯೂ ಮಾದರಿ ನ್ಯಾಯಾಲಯವಾಗಿ ಯಾದಗಿರಿಯ ಜಿಲ್ಲಾ ನ್ಯಾಯಾಲಯ ರೂಪುಗೊಳ್ಳಲಿ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಅಭಯ ಶ್ರೀನಿವಾಸ ಒಕಾ ಹಾರೈಸಿದರು.

ನಗರದ ಮಿನಿ ವಿಧಾನಸೌಧ ಕಟ್ಟಡದ ಹಿಂಭಾಗದಲ್ಲಿ ಗುರುವಾರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿದ್ದ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯ ಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಯಾಂಗ, ವಕೀಲರು ಸೇರಿದಂತೆ ಎಲ್ಲರ ಸಹಕಾರದಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ನ್ಯಾಯಾಲಯ ನಿರ್ಮಾಣವಾಗಲಿ. ಅದಕ್ಕೆ ಅವಶ್ಯವಾದ ಸಹಕಾರ, ಮಾರ್ಗದರ್ಶನ ಹಾಗೂ ಬೆಂಬಲವನ್ನು ಹೈಕೋರ್ಟ್ ಹಂತದಿಂದ ನೀಡುವುದಾಗಿ’ ಭರವಸೆ ನೀಡಿದರು.

ADVERTISEMENT

‘ಪ್ರಸ್ತುತ ಜಿಲ್ಲಾಡಳಿತದ ವತಿಯಿಂದ 10 ಎಕರೆ ಜಮೀನು ನೀಡಲಾಗಿದೆ. ಉಳಿದ ಜಮೀನು ಸಹ ಶೀಘ್ರವೇ ನೀಡುವ ಭರವಸೆಯಿದೆ. ಕಟ್ಟಡ ನಿರ್ಮಾ ಣವು ಪೂರ್ಣಗೊಂಡ ಕೂಡಲೇ ಸುಸಜ್ಜಿತ ನ್ಯಾಯಾಲಯದ ಬೇಡಿಕೆಯು ಪೂರ್ಣಗೊಳ್ಳಲಿದೆ’ ಎಂದರು.

ಜಿಲ್ಲಾ ಆಡಳಿತಾತ್ಮಕ ನ್ಯಾ.ನಟರಾಜ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಹೈಕೋರ್ಟ್ ನ್ಯಾ.ಪಿ.ಎಸ್.ದಿನೇಶಕುಮಾರ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ನ್ಯಾ.ಅಶೋಕ ಕಿಣಗಿ ಆನ್‌ಲೈನ್ ಮೂಲಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ನಾಡೇಕರ ನಾಯ್ಕಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್, ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಇದ್ದರು.

ವಕೀಲರಾದ ನರಸಿಂಗರಾವ್ ಕುಲಕರ್ಣಿ ಪರಿಚಯಿಸಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ಶ್ರೀಧರ ಸ್ವಾಗತಿಸಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಮಾಡ್ಬಾಳ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.