ಯಾದಗಿರಿ: ಪ್ರಸಕ್ತ ದಿನಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂವೈಯಕ್ತಿಕ ಹಾಗೂ ಕೌಟುಂಬಿಕ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಸ್ವಲ್ಪ ಸಮಯ ಆಧ್ಯಾತ್ಮಿಕದ ಕಡೆಗೆ ಒಲವು ತೋರಿಸಬೇಕು ಎಂದು ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯ ಸ್ವಾಮೀಜಿನುಡಿದರು.
ಬಸವೇಶ್ವರ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೂತನವಾಗಿ ನಿರ್ಮಾಣ ಮಾಡಿರುವ ಈಶ್ವರ ಹಾಗೂ ಬಸವಣ್ಣ ಮಂದಿರದ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಸ್ವಲ್ಪ ಸಮಯ ಕಳೆದರೆ ಒತ್ತಡದ ಬದುಕಿಗೆ ಶಾಂತಿ, ಸಿಗುವ ಜತೆಗೆ ಹೊಸ ಚೈತನ್ಯ ಶಕ್ತಿ ಲಭಿಸುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಾಮರಸ್ಯ ಮೂಡುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ ಮಾತನಾಡಿ, ಸತ್ಸಂಗ ಹಾಗೂ ಶ್ರೀಗಳ ಆಶೀರ್ವಾದದಿಂದ ನಮ್ಮ ಬದುಕಿಗೆ ಆಧ್ಯಾತ್ಮಿಕ ಸಂಸ್ಕಾರ ಸಿಗುವುದರ ಜತೆಗೆ ಬದುಕಿಗೆ ಮೌಲ್ಯ ದೊರೆಯುತ್ತದೆ ಎಂದು
ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಈಶ್ವರ ಮತ್ತು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ರಾಮರೆಡ್ಡಿಗೌಡ ತಂಗಡಗಿ ಮಾತನಾಡಿ, ನಗರದ ಜನರ ಬಹುದಿನದ ಆಸೆಯಂತೆ ಎಲ್ಲರ ಸಹಕಾರದಿಂದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಎಲ್ಲರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾತ್ರ, ಇಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗಿ ಎಲ್ಲರನ್ನು ದೇವಸ್ಥಾನ ಆಕರ್ಷಿಸುತ್ತದೆ ಎಂದು ತಿಳಿಸಿದರು.
ಹಲಕರ್ಟಿಯ ಅಭಿನವ ಮುನೀಂದ್ರ ಶಿವಾಚಾರ್ಯ ಸ್ವಾಮೀಜಿ, ಮುದ್ನೂರ ಕಂಠಿಮಠದ ಸಿದ್ದಮಲ್ಲಿಕಾರ್ಜುನ ಶಿವಾಚಾರ್ಯರು, ರಾಚಯ್ಯ ಸ್ವಾಮಿ ಚನ್ನೂರ, ಮಾಜಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ, ಮಹೇಶರೆಡ್ಡಿ ಮುದ್ನಾಳ, ಚನ್ನಪ್ಪಗೌಡ ಮೋಸಂಬಿ, ಅಮೀನರಡ್ಡಿ ಬಿಳ್ಹಾರ ಹತ್ತಿಕುಣಿ, ಲಕ್ಷ್ಮಣರಾವ ಹೆಂದೆ, ಸಿದ್ದಲಿಂಗರೆಡ್ಡಿ ಉಳ್ಳೆಸೂಗುರ, ಮಹಾದೇವಪ್ಪಗೌಡ ಅಬ್ಬೆತುಮಕೂರ, ಸೋಮನಾಥ ಜೈನ, ಚಂದ್ರಾಯಗೌಡ ದೇವಣಗಾಂವ ಗೋಗಿ, ಸಿದ್ರಾಮರಡ್ಡಿ ಚನ್ನೂರ, ಶರಣಗೌಡ ಕಾಳೆಬೆಳಗುಂದಿ, ರವಿ ಬಾಪೂರೆ, ಡಾ.ಶಿವಪುತ್ರರಡ್ಡಿ ಚಟ್ನಳ್ಳಿ, ಶಿವಕುಮಾರ ದೊಡ್ಮನಿ, ಶರಣಪ್ಪ ಮಹಾಮನಿ, ಡಾ.ಸಿದ್ದರಾಜ, ರಮೇಶ ದೊಡ್ಮನಿ ಇದ್ದರು.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಮಾರಂಭದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಜಗದೀಶ ನಿರೂಪಿಸಿ ಸ್ವಾಗತಿಸಿದರೆ, ದೇವಿಂದ್ರಪ್ಪ ಮಹಾಮನಿ
ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.