
ಯಾದಗಿರಿ: ಜಿಲ್ಲೆಯನ್ನು ಹಸಿ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ, ರೈತರ ಸಾಲವನ್ನು ಸಹ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹಾಗೂ ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಅಲ್ಪ ಸ್ವಲ್ಪ ಬೆಳೆದ ಮುಂಗಾರಿನ ಬೆಳೆಗಳಾದ ಹತ್ತಿ, ಭತ್ತ, ತೊಗರಿ ಬೆಳೆಗಳಿಗಾಗಿ ಖರೀದಿ ಕೇಂದ್ರ ತೆರೆಯಬೇಕು. ವೈಜ್ಞಾನಿಕ ಬೆಲೆ ನಿಗದಿಗೊಳಿಸಿ, ಜಿಲ್ಲೆಯನ್ನು ಸಂಪೂರ್ಣ ಹಸಿ ಬರವೆಂದು ಘೋಷಣೆ ಮಾಡಿ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಹತ್ತಿ, ಭತ್ತ, ತೊಗರಿ, ಶೇಂಗಾ ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳು ನಾಶವಾಗಿವೆ. ರೈತನ ಬದುಕು ದಿಕ್ಕೆಟ್ಟು ಹೋಗಿದೆ. ಮಳೆ ಗಾಳಿಯಿಂದಾಗಿ ಮುಂಗಾರಿನ ಫಸಲುಗಳು ಸಂಪೂರ್ಣ ನೆಲಕ್ಕೆ ಬಿದ್ದು ಹತ್ತಿ, ಮೆಣಸಿನಕಾಯಿ ಮತ್ತು ಭತ್ತವೂ ಹಾಳಾಗಿದೆ. ಮಾರ್ಕೆಟ್ನಲ್ಲಿ ಧಾರಣಿ ಇಲ್ಲದೆ ಹತ್ತಿ ಕೂಡ ಮಾರಾಟ ಮಾಡಲು ತೊಂದರೆಯಾಗಿದೆ ಎಂದು ಹೇಳಿದ್ದಾರೆ.
ಹಿಂಗಾರಿನ ಬೆಳೆಗೆ ಆಣೆಕಟ್ಟಿನಿಂದ ನೀರು ಒದಗಿಸುವ ಸಲುವಾಗಿ ಕೂಡಲೇ ನೀರಾವರಿ ಸಲಹಾ ಸಮಿತಿ ತೀರ್ಮಾನ ತೆಗೆದುಕೊಂಡು ಈ ಬಗ್ಗೆ ತೀರ್ಮಾನ ಪ್ರಕಟಿಸಬೇಕು. ತೀರ್ಮಾನ ಮಾಡುವದರಿಂದ ಪೂರ್ವಭಾವಿ ತಯಾರಿಗಾಗಿ ರೈತ ತನ್ನ ಒಕ್ಕಲನ್ನು ಆರಂಭಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರವು ಗಮನಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.
ಮಳೆಯಿಂದಾಗಿ ಹಾನಿಗೊಳಗಾದ ಹೊಲಗಳಿಗೆ ಸೂಕ್ತ ಪರಿಹಾರ ನಿಗದಿಪಡಿಸಬೇಕು.
ಒಂದು ವೇಳೆ ಸರ್ಕಾರವು ಮೀನಾಮೇಷ ಎಣಿಸುತ್ತಾ ತಡಮಾಡಿದರೆ ರೈತ ಸಂಘವು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಸಮಿತಿಯ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಜಿಲ್ಲಾ ಅಧ್ಯಕ್ಷ ಶರಣು ಮಂದರವಾಡ, ಪ್ರಮುಖರಾದ ಮಲ್ಕಣ್ಣ ಚಿಂತಿ, ಚಂದ್ರಕಲಾ ಬಾಗೂರು, ಮಲ್ಲಣ್ಣ ನೀಲಹಳ್ಳಿ, ಭೀಮರಾಯ ಎಲೇರಿ, ಪ್ರಭಾಕರೆಡ್ಡಿ ಕೊಂಗಂಡಿ, ಭೀಮರಾಯ ಹಾಲಗೇರಾ, ಫಕೀರ್ ಅಹಮದ್ ಮರಡಿ, ಶಿವರಾಜ ಕೋನಹಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.