ಯಾದಗಿರಿ: ಭೀಮಾ ನದಿ ಪ್ರವಾಹದಿಂದ ತತ್ತರಿಸಿದ್ದ ಜನತೆಗೆ ತರಕಾರಿ, ಹೂ, ಹಣ್ಣಗಳ ದರ ಏರಿಕೆ ಹೊರೆಯಾಗಿದೆ.
ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಅಂಗವಾಗಿ ನಗರದ ಗಾಂಧಿವೃತ್ತ ಸೇರಿದಂತೆ ವಿವಿಧ ಪ್ರಮುಖ ವೃತ್ತಗಳಲ್ಲಿ ಪೂಜಾ ಸಾಮಾಗ್ರಿ ಮಾರಾಟಕ್ಕೆ ಇಡಲಾಗಿದೆ. ಆದರೆ, ಬೆಲೆ ಏರಿಕೆಯಿಂದ ಗ್ರಾಹಕರು ಬಸವಳಿಯುವಂತೆ ಆಗಿದೆ.ತರಕಾರಿಯಲ್ಲಿ ಈರುಳ್ಳಿ ಶತಕ ಬಾರಿಸಿದೆ. ಇದು ಗ್ರಾಹಕರಿಗೆ ಕಣ್ಣೀರು ತರಿಸಿದೆ. ಆದರೆ, ವ್ಯಾಪಾರಿಗಳು ಖುಷ್ ಆಗಿದ್ದಾರೆ.
ನುಗ್ಗಿಕಾಯಿ ₹80 ಇದೆ. ಆದರೆ, ಕೋತಂಬರಿ ಸೊಪ್ಪು ಒಂದು ಕಟ್ಟು ₹40ಗೆ ಮಾರಾಟವಾಗುತ್ತಿದೆ. ಪುಂಡಿಪಲ್ಯೆ ₹20ಗೆ ಮೂರು ಕಟ್ಟು, ರಾಜಗಿರಿ ₹20ಗೆ 3 ಕಟ್ಟು, ಮೆಂತ್ಯೆ ಚಿಕ್ಕ ಗಾತ್ರ ಒಂದು ಕಟ್ಟು ₹10, ಪಾಲಕ್ ₹20ಗೆ ಮೂರು ಕಟ್ಟುನಂತೆ ಮಾರಾಟವಾಗುತ್ತಿದೆ. ಅಧಿಕ ಮಳೆಯಿಂದ ಸೊಪ್ಪುಗಳು ಎಲ್ಲವೂ ನೀರಿನಲ್ಲಿ ಕೊಳೆತು ಹೋಗಿವೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.
ಹೂ, ಹಣ್ಣುಗಳ ಏರಿಯೂ ದಿಢೀರ್ನೆ ಬೆಲೆ ಹೆಚ್ಚಳವಾಗಿದೆ. ಮಲ್ಲಿಗೆ ಹೂ ಬೆಲೆ ಕೇಳಿದರೆ ಗ್ರಾಹಕರು ಮಾರು ದೂರ ತೆರಳುವಂತೆ ಆಗಿದೆ.ಆಯುಧ ಪೂಜೆಗೆ ಬೇಕಾಗುವ ಬಾಳೆ ದಿಂಡು, ಕುಂಬಳಕಾಯಿ ದರ ತುಸು ಹೆಚ್ಚೆ ಇದೆ.
ದೊಡ್ಡ ಗಾತ್ರ ದಿಂಡು ಜೋಡಿ ₹70, ಚಿಕ್ಕ ಗಾತ್ರದ ಜೋಡಿಗೆ ₹50 ಬೆಲೆ ಇದೆ. ಚಿತ್ತಾಪುರ ತಾಲ್ಲೂಕಿನ ಸಾತನೂರ ಗ್ರಾಮದಿಂದ ಬಾಳೆ ದಿಂದು ತಂದ್ದಿದ್ದೇವೆ ಎಂದು ವ್ಯಾಪಾರಿ ಯಲ್ಲಯ್ಯ ನಾಯಕ ಹೇಳಿದರು.ಇನ್ನು ಕುಂಬಾಳಕಾಯಿ ಒಂದಕ್ಕೆ ₹80 ದರವಿದೆ. ಕಬ್ಬಿನ ಜಲ್ಲೆ ಜೋಡಿ ₹50ಗೆ ಮಾರಾಟವಾಗುತ್ತಿದೆ.
‘ವಿಪರೀತ ಮಳೆಯಿಂದ ಕಬ್ಬಿನ ತೋಟ ಹಾಳಾಗಿದೆ. ಸ್ವಲ್ಪ ಮಾತ್ರವೇ ಮಾರುಕಟ್ಟೆಗೆ ತಂದಿದ್ದೇನೆ’ ಎನ್ನುತ್ತಾರೆ ರೈತ ಮಹಿಳೆ ನಾಗಮ್ಮ ಪಟ್ಟದ್.ಚೆಂಡು ಹೂ ಹುಂಡಿ ಒಂದಕ್ಕೆ ₹50 ಇದ್ದರೆ, ಹಾರ ₹60 ಇದೆ. ₹20ಗೆ ಒಂದು ಕಾಯಿ ಮಾರಾಟವಾಗುತ್ತಿದೆ.
ಕನಕಾಂಬರ ಒಂದು ಮೊಳಕ್ಕೆ ₹50, ಸೇವಂತಿ ₹50, ಮಲ್ಲಿಗೆ 60, ಕಾಕಡ ಮಲ್ಲಿಗೆ ₹500 ರಿಂದ ₹120 ಕೆಜಿ ಏರಿಕೆಯಾಗಿದೆ. ಗುಲಾಬಿ ಹೂ ಕೆಜಿಗೆ ₹300 ಆಗಿದೆ.
***
ಈ ಬಾರಿ ಹೂ ಬೆಳೆದವರು ಚೆನ್ನಾಗಿದ್ದಾರೆ. ಮಾರಾಟಗಾರರು ಬೆಲೆ ಏರಿಕೆಯಿಂದ ಕೆಲ ಹೂಗಳನ್ನು ತರಲಿಕ್ಕೆ ಆಗಿಲ್ಲ
ಮಹಮ್ಮದ್ ಖಾಜಾ, ಹೂವಿನ ವ್ಯಾಪಾರಿ
***
ಕಳೆದ ವಾರಕ್ಕಿಂತ ಈ ವಾರ ಕೆಲ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ವಿಶೇಷವಾಗಿ ಈರುಳ್ಳಿ ದರ ಭಾರಿ ಹೆಚ್ಚಳವಾಗಿದೆ
ಅಕ್ರಮ ಪಾಶಾ, ತರಕಾರಿ ವ್ಯಾಪಾರಿ
***
ಕೊರೊನಾ, ಪ್ರವಾಹದಿಂದ ಈ ಬಾರಿ ನಿರೀಕ್ಷಿತ ವ್ಯಾಪಾರವೇ ಆಗಿಲ್ಲ. ಭಾನುವಾರ ಹೆಚ್ಚಿನ ವ್ಯಾಪಾರವಾಗಬಹುದು
ಶ್ರೀನಾಥ, ಕಿರಾಣಿ ಅಂಗಡಿ ಮಾಲಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.