
ಸುರಪುರ: ‘ನಾವು ಕಷ್ಪಪಟ್ಟು ಎಷ್ಟೆ ಹಣ ಗಳಿಸಿದರೂ ಇಲ್ಲೆ ಬಿಟ್ಟು ಹೋಗುತ್ತೇವೆ. ನಮ್ಮ ಸಂಪಾದನೆಯ ಕೆಲ ಭಾಗವನ್ನಾದರೂ ದೇಣಿಗೆ ನೀಡಿದರೆ ಜನ್ಮ ಸಾರ್ಥಕವಾಗುತ್ತದೆ’ ಎಂದು ಭೂದಾನಿ ಖಾಲೀದ್ ಅಹ್ಮದ್ ತಾಳಿಕೋಟಿ ಹೇಳಿದರು.
ರಂಗಂಪೇಟೆಯ ಮೌಲಾನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಈಚೆಗೆ ಭೂದಾನ ಮಾಡಿದ ತಮಗೆ ಮುಸ್ಲಿಂ ಸಮಾಜದ ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಶಿಕ್ಷಣದಲ್ಲಿ ಶಕ್ತಿ ಅಡಗಿದೆ. ಕಷ್ಟಪಟ್ಟು ಓದುವ ವಿದ್ಯಾರ್ಥಿಗೆ ಖಂಡಿತ ಉಜ್ವಲ ಭವಿಷ್ಯ ಇರುತ್ತದೆ. ನಾನು ಓದಿರುವುದು ಕಡಿಮೆ. ನನ್ನ ಎಲ್ಲ ಮಕ್ಕಳು ಚೆನ್ನಾಗಿ ಓದಿ ಉನ್ನತ ಸೇವೆಗಳಲ್ಲಿ ಇದ್ದಾರೆ. ಶಿಕ್ಷಣಕ್ಕೆ ನೀಡಿದ ದಾನ ಸರ್ವಶ್ರೇಷ್ಠ’ ಎಂದರು.
ವಕೀಲ ಅಮ್ಜದ್ಖಾನ್ ಭಾಗವಾನ ಮಾತನಾಡಿ, ‘ವೃತ್ತಿಯಿಂದ ವಕೀಲನಾದರೂ ಬಿಡುವಿನ ಸಮಯದಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ. ನೋಟರಿ ಆಗಿರುವುದರಿಂದ ಬಡವರ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಇದನ್ನು ಗಮನಿಸಿ ಪ್ರೆಸ್ ಕ್ಲಬ್ ಈಚೆಗೆ ನನಗೆ ಸೇವಾರತ್ನ ಪ್ರಶಸ್ತಿ ನೀಡಿದೆ’ ಎಂದರು.
ಚಿನ್ನುಮಿಯಾ ಪಟೇಲ ಮಾತನಾಡಿ, ‘ಮೂಲತಃ ಜೇವರ್ಗಿ ತಾಲ್ಲೂಕಿನವನಾದ ನನಗೆ ಸುರಪುರದ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಲಭಿಸಿತು. ನನ್ನ ಕೈಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
ಸಮಾಜದ ಮುಖಂಡರಾದ ಖಾಜಾ ಖಲೀಲ ಅಹ್ಮದ್ ಅರಿಕೇರಿ, ರಬ್ಬಾನಿ ಮೋಲಿಸಾಬ, ದಾವುದ್ ಇಬ್ರಾಹಿಂ ಪಠಾಣ, ಅಬಿದ ಪಗಡಿ, ಎಂ. ಪಟೇಲ, ಖಾಜಾ ಅಜ್ಮೀರ್ ಖುರೇಶಿ, ಇಮಾಮಸಾಬ ವಾಗಣಗೇರಿ, ಚಾಂದಸಾಬ ಕುಂಬಾರಪೇಟ, ಫಜಲ ನಾಸಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.