ಯಾದಗಿರಿ: ಕಳೆದ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲದಿದ್ದರೂ ನಮ್ಮ ತಂದೆಯ ಮೇಲೆ ವಿಶ್ವಾಸವಿಟ್ಟು ಮತದಾರರು ವಿಧಾನ ಪರಿಷತ್ತಿಗೆ ಕಳಿಸಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಮ್ಮೆ ಬಿ.ಜಿ.ಪಾಟೀಲರನ್ನು ಆಶೀರ್ವದಿಸುವಂತೆ ಕ್ರೇಡಾಲ್ ಅಧ್ಯಕ್ಷ ಚಂದು ಬಿ.ಪಾಟೀಲ ಮನವಿ ಮಾಡಿದರು.
ಕಲಬುರಗಿ–ಯಾದಗಿರಿ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣೆ ಅಂಗವಾಗಿ ಶುಕ್ರವಾರ ಯಾದಗಿರಿ ಕ್ಷೇತ್ರದ ಗುರುಸಣಿಗಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಪರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಮತದಾರರ ಋಣ ನಮ್ಮ ತಲೆಯ ಮೇಲಿದೆ. ಕಳೆದ ಚುನಾವಣೆಯಲ್ಲಿ ಪಕ್ಷ ಬಿ.ಜಿ.ಪಾಟೀಲ ಅವರಿಗೆ ಅವಕಾಶ ನೀಡಿತ್ತು. ಆ ವೇಳೆ ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ಸೇರಿ ಪಕ್ಷದ ಮುಖಂಡರು ನಮಗೆ ಹೆಗಲಿಗೆ ಹೆಗಲು ಕೊಟ್ಟು ಗೆಲುವಿನ ದಡ ಸೇರಿಸಿದ್ದಾರೆ ಎಂದರು.
ಶಾಸಕ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ಅಧಿವೇಶನದಲ್ಲಿ ನಮ್ಮ ಸರ್ಕಾರ ಯಾವುದೇ ಬಿಲ್ ಪಾಸ್ ಮಾಡಬೇಕಾದರೆ ಮೇಲ್ಮನೆಯಲ್ಲಿ ನಮಗೆ ಬಹುಮತದ ಅವಶ್ಯಕತೆ ಇದೆ. ಈ ಬಾರಿ 20 ಸ್ಥಾನಗಳ ಪೈಕಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಹೀಗಾಗಿ ಮತದಾರರು ಬಿ.ಜಿ.ಪಾಟೀಲರಿಗೆ ಆಶಿರ್ವಾದ ಮಾಡುವಂತೆ ಕೋರಿದರು.
ಮಾಜಿ ಶಾಸಕ ವೀರಬಸವಂತರಡ್ಡಿ ಮುದ್ನಾಳ ಮಾತನಾಡಿ, ವಿವೇಚನೆ ಯಿಂದ ಮತ ಚಲಾಯಿಸಿ. ಬಿ.ಜಿ.ಪಾಟೀಲರು ಸರಳ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಮತದಾರರು ಪಕ್ಷಾತೀತವಾಗಿ ಅವರಿಗೆ ಬೆಂಬಲಿಸಿ ಎಂದರು.
ಯುವ ಮುಖಂಡ ಮಹೇಶರಡ್ಡಿಗೌಡ ಮುದ್ನಾಳ, ಗ್ರಾಮೀಣ ಮಂಡಲಾಧ್ಯಕ್ಷ ರಾಜಶೇಖರ ಕಾಡಂನೂರ, ಗ್ರಾಪಂ ಅಧ್ಯಕ್ಷ ಶಿವರಾಜಗೌಡ ಬೀರನಾಳ, ಎಪಿಎಂಸಿ ಅಧ್ಯಕ್ಷ ವೀರಣ್ಣ ಸಾಹು ತಡಿಬಿಡಿ, ಪ್ರಮುಖರಾದ ಶ್ರೀನಿವಾಸರಡ್ಡಿ ಚೆನ್ನೂರ, ಸಿದ್ದನಗೌಡ ಕಾಡಂನೂರ, ದೇವರಾಜ ನಾಯಕ, ಪರಶುರಾಮ ಕುರಕುಂದಿ, ಗೋವಿಂದಪ್ಪ ಕೊಂಚೆಟ್ಟಿ, ಮಲ್ಲನಗೌಡ ಗೋಡಿಹಾಳ ಇದ್ದರು.
ಶಿವು ಕೊಂಕಲ್ ನಿರೂಪಿಸಿದರು. ಮಲ್ಲು ಸ್ವಾಮಿ ಸ್ವಾಗತಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.