ಯಾದಗಿರಿ: ಹೈದರಾಬಾದ್ನ ಗಚ್ಚಿಬೌಲಿಯಲ್ಲಿ ಪಶು ವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಹಾಗೂ ಮಹಿಳಾ ಸಹಾಯವಾಣಿ 112 ಕುರಿತು ವ್ಯಾಪಕ ಜಾಗೃತಿ ಮೂಡಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಹಿಂದೂ ಸಾಮ್ರಾಟ್ ಶಿವಾಜಿ ಸೇನಾ ವತಿಯಿಂದ ನಗರದಲ್ಲಿ ಮಾನವ ಸರಪಳಿ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ಸೋಮವಾರ ಬೆಳಿಗ್ಗೆ ಇಲ್ಲಿಯ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿ ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ಇದೇ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಹಾಗೂ ಉಡಾಫೆಯಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಸಂಘದ ಅಧ್ಯಕ್ಷ ಪರಶುರಾಮ ಶೇಗುರಕರ್ ಮಾತನಾಡಿ, ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ನಡೆಸಿದ ಅಮಾನುಷ ಸಾಮೂಹಿಕ ಅತ್ಯಾಚಾರ ಘಟನೆ ಮಾನವ ಕುಲ ತಲೆ ತಗ್ಗಿಸುವಂತಾಗಿದೆ. 7 ತಿಂಗಳ ಹಿಂದೆಯೇ ಇದೇ ತೆಲಂಗಾಣ ರಾಜ್ಯದ ವರಂಗಲ್ ಜಿಲ್ಲೆಯ ಆನಂಕೊಂಡ ಗ್ರಾಮದಲ್ಲಿನ ಕುಮಾರ ತಲ್ಲಿ ಕಾಲೊನಿಯಲ್ಲಿ 1 ವರ್ಷದ ಹಸುಳೆ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಕೂಸನ್ನು ತೊಟ್ಟಿಲಿನಿಂದ ಎತ್ತಿಕೊಂಡು ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇಷ್ಟೆಲ್ಲ ನಡೆದರೂ ಇಂತಹ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿವೆ. ಮತ್ತೆ ಈಗ ಪ್ರಿಯಾಂಕಾ ಪ್ರಕರಣ ಸೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ, ಶಂಕರ ಬಸುನಾಯಕ, ಖತಾಲಪ್ಪ ಚಿಂತನಳ್ಳಿ, ನರೇಶ, ಶರಣು ಕಾಳೆಬೆಳಗುಂದಿ, ಚಂದ್ರು, ಯಲ್ಲಪ್ಪ ಚಾಮನಳ್ಳಿ, ಶರಣಪ್ಪ, ಮಲ್ಲಪ್ಪ ಹೊನಿಗೇರಾ, ಆನಂದ ಯುಂಪಾಡ, ಬಂಗಾರು ರಾಠೋಡ, ಶಂಕರ ಭಂಗಿ, ಹಣಮಂತ ಚಿಂತನಳ್ಳಿ, ಭೀಮು ಬೆಳಗೇರಾ, ಮಲ್ಲು ತುಮಕೂರು, ಸಿದ್ದು ಕರಣಿಗಿ, ಮಂಜುನಾಥ ಅಲೆಮನಿ, ಲೋಕನಾಥ ಹಡಪದ, ಮಲ್ಲು ಲಿಂಗೇರಿ, ಗವಿಂದ್ರ ತಾತಳಗೇರಾ, ನಿಂಗಪ್ಪ, ಸಿದ್ದಪ್ಪ, ತಾಯಪ್ಪ, ಸಿದ್ರಾಮಪ್ಪ ಕರಣಿಗಿ, ಸಿದ್ದೇಶ್ವರ, ವಿದ್ಯಾರ್ಥಿಗಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.