ADVERTISEMENT

ಯಾದಗಿರಿ | ಕೃಷಿಕರ ಸಾಲ ಮನ್ನಾ ಮಾಡಿಸಿ: ರೈತರ ಮನವಿ

ನೆರೆ ಪೀಡಿತ ಪ್ರದೇಶಗಳಿಗೆ ಸಂಸದ ಕುಮಾರ ನಾಯಕ್ ಭೇಟಿ: ಕೇಂದ್ರದ ಗಮನಕ್ಕೆ ತರುವಂತೆ ರೈತರು ಮನವಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:23 IST
Last Updated 7 ಅಕ್ಟೋಬರ್ 2025, 5:23 IST
ಯಾದಗಿರಿಯ ನಾಯ್ಕಲ್ ಗ್ರಾಮದಲ್ಲಿ ಸೋಮವಾರ ನೆರೆಯಿಂದ ಹಾನಿಗೀಡಾದ ಭತ್ತವನ್ನು ಸಂಸದ ಜಿ.ಕುಮಾರ ನಾಯಕ್, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ವೀಕ್ಷಿಸಿದರು. ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು
ಯಾದಗಿರಿಯ ನಾಯ್ಕಲ್ ಗ್ರಾಮದಲ್ಲಿ ಸೋಮವಾರ ನೆರೆಯಿಂದ ಹಾನಿಗೀಡಾದ ಭತ್ತವನ್ನು ಸಂಸದ ಜಿ.ಕುಮಾರ ನಾಯಕ್, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ವೀಕ್ಷಿಸಿದರು. ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು   

ಯಾದಗಿರಿ: ಭೀಮಾ ನದಿ ಪ್ರವಾಹದಿಂದ ನೀರು ಒಂದು ವಾರ ಜಮೀನುಗಳಲ್ಲಿ ನಿಂತಿದ್ದರಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕೃಷಿಕರ ಸಾಲವನ್ನು ಮನ್ನಾ ಮಾಡಿಸುವಂತೆ ರೈತರು ಸಂಸದರ ಮುಂದೆ ಪ್ರಸ್ತಾಪ ಮಾಡಿದರು.

ರಾಯಚೂರು–ಯಾದಗಿರಿ ಸಂಸದ ಜಿ.ಕುಮಾರ ನಾಯಕ್ ಅವರು ಸೋಮವಾರ ಅತಿವೃಷ್ಟಿ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ‍ಪರಿಶೀಲನೆ ನಡೆಸಿದ ವೇಳೆ ಕೃಷಿಕರು ತಮ್ಮ ಅಳಲು ತೋಡಿಕೊಂಡು, ಹೆಚ್ಚಿನ ಪರಿಹಾರ ಮತ್ತು ಸಾಲ ಮನ್ನಾದ ಬೇಡಿಕೆಯನ್ನು ಇರಿಸಿದರು.

‘ಕೆಲ ವಾರಗಳು ಕಳೆದಿದ್ದರೆ ತೆನೆ ಕಟ್ಟಿದ್ದ ಭತ್ತ ರಾಶಿ ಮಾಡಲು ಬರುತ್ತಿತ್ತು. ಆದರೆ, ಪ್ರವಾಹದ ಹಿನ್ನೀರು ಭತ್ತ, ತೊಗರಿ, ಹತ್ತಿಯ ಬೆಳೆಗಳಲ್ಲಿ ಒಂದು ವಾರ ಕಾಲ ನಿಂತಿತು. ಇದರಿಂದ ಇಡೀ ಬೆಳೆ ಹಾಳಾಗಿ, ಕೃಷಿ ಜಮೀನು ಗಬ್ಬು ನಾರುತ್ತಿದೆ’ ಎಂದು ನಾಯ್ಕಲ್ ರೈತರು ಅಳಲು ತೋಡಿಕೊಂಡರು.

ADVERTISEMENT

‘ಗ್ರಾಮದಲ್ಲಿ ಮೊಳಕಾಲುದ್ದ ನೀರು ನಿಂತು ಮನೆಯ ಮೇಲೆ ಆಶ್ರಯ ಪಡೆದಿದ್ದೇವೆ. ನೀರಿನಿಂದಾಗಿ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಬೇರೆ ಕಡೆ ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ನಾಯ್ಕಲ್ ನಿವಾಸಿ ಸಲೀಂ ಮನವಿ ಮಾಡಿದರು.

ಇದಕ್ಕೂ ಮುನ್ನ ಗುರುಸುಣಿಗಿ ಬ್ಯಾರೇಜ್‌ ಸುತ್ತಲಿನ ಪ್ರದೇಶವನ್ನು ವೀಕ್ಷಣೆ ಮಾಡಿದರು. ವಡಗೇರಾ ತಾಲ್ಲೂಕಿನ ಗುರುಸುಣಿಗಿ ಗ್ರಾಮದ ಶಂಕರಪ್ಪಗೌಡ ಬಸವರಾಜಪ್ಪ, ವಿಶ್ವನಾಥರೆಡ್ಡಿ ಸೋಮಾನಥರೆಡ್ಡಿ, ನಾಯ್ಕಲ್‌ನ ಮೊಹಮ್ಮದ್ ಹನೀಫ್ ಬಡೇಸಾಬ್ ಅವರ ಜಮೀನುಗಳಿಗೆ ತೆರಳಿದರು. ಹಾನಿಯಾದ ಬೆಳೆಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. 

ನೀರು ನಿಲ್ಲದಂತೆ ಯೋಜನೆ ರೂಪಿಸಿ: ಶಹಾಪುರ ರಸ್ತೆ ಬದಿ ಜಮೀನಿನಲ್ಲಿ ನೀರು ನಿಂತು ಹತ್ತಿ ಬೆಳೆ ಹಾನಿಯಾಗಿದ್ದನ್ನು ವೀಕ್ಷಿಸಿದ ಸಂಸದರು, ‘ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಮಳೆ ನೀರು ಜಮೀನುಗಳಲ್ಲಿ ನಿಲ್ಲದಂತೆ ಸ್ವಾಭಾವಿಕವಾಗಿ ಹರಿದು ಹೋಗುವಂತೆ ವಿನ್ಯಾಸ ರೂಪಿಸುವುದು ಪಿಡಬ್ಲ್ಯುಡಿ ಎಂಜಿನಿಯರ್‌ಗಳ ಕೆಲಸ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ತಹಶೀಲ್ದಾರ್ ಸುರೇಶ ಅಂಕಲಗಿ, ಸಹಾಯಕ ಕೃಷಿ ನಿರ್ದೇಶಕರಾದ ಸುರೇಶ, ಸುನಿಲ್‌ ಕುಮಾರ, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಸಮೀಕ್ಷೆ ಮುಗಿಯುತ್ತಿದ್ದಂತೆ ಶೀಘ್ರ ಪರಿಹಾರ’

‘ಬೆಳೆ ಹಾನಿ ಮನೆ ಹಾನಿಯ ಕುರಿತು ಅಧಿಕಾರಿಗಳಿಂದ ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷೆ ಕಾರ್ಯ ಮುಗಿಯುತ್ತಿದಂತೆ ಪರಿಹಾರ ವಿತರಣೆ ಮಾಡಲಾಗುವುದು’ ಎಂದು ಸಂಸದ ಜಿ.ಕುಮಾರ ನಾಯಕ್ ಹೇಳಿದರು. ನಾಯ್ಕಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರಾಜ್ಯ ಸರ್ಕಾರದಿಂದ ಮಳೆಯಾಶ್ರಿತ ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ತಲಾ ₹ 8500 ಹೆಚ್ಚುವರಿ ಪರಿಹಾರ ಘೋಷಣೆ ಮಾಡಿದ್ದು ಶೀಘ್ರವೇ ರೈತರಿಗೆ ನೀಡಲಿದೆ’ ಎಂದರು. ‘ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಪಡೆಯುವ ಬಗ್ಗೆ ರಾಜ್ಯ ಮಟ್ಟದಲ್ಲಿ ಏನು ತೀರ್ಮಾನ ಆಗುತ್ತ ರಾಜ್ಯ ಸರ್ಕಾರದ ನಿಲುವಿನ ಪ್ರಕಾರ ನಾವು ನಡೆದುಕೊಳ್ಳುತ್ತೇವೆ. ಎನ್‌ಆರ್‌ಎಫ್‌ ಮಾರ್ಗಸೂಚಿಯಲ್ಲಿ ಸ್ಥಳೀಯವಾಗಿ ಹೆಚ್ಚಿನ ಪರಿಹಾರ ಹೇಗೆ ಪಡೆಯಬಹುದು ಎಂಬುದನ್ನು ಅಧ್ಯಯನ ಮಾಡಿ ಕೇಂದ್ರ ಸರ್ಕಾರದ ಗಮನಕ್ಕೂ ತರುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಶಾಶ್ವತ ಪರಿಹಾರಕ್ಕೆ ಮನವಿ

ನಾಯ್ಕಲ್ ಗ್ರಾಮದಲ್ಲಿ ಪ್ರತಿ ಬಾರಿ ಪ್ರವಾಹ ಬಂದಾಗ ನೂರಾರು ಮನೆಗಳು ಮುಳುಗಡೆ ಆಗುತ್ತವೆ. ಇಡೀ ಗ್ರಾಮವನ್ನು ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಸಂಸದರಿಗೆ ಮನವಿಪತ್ರ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಜಿ.ಕುಮಾರ ನಾಯಕ್ ‘ಸುಮಾರು 270 ಮನೆಗಳು ಪ್ರತಿ ಬಾರಿ ಪ್ರವಾಹಕ್ಕೆ ತುತ್ತಾಗುತ್ತಿರುವುದಾಗಿ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮತ್ತು ಶಾಸಕರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಸಹಿಸಲಸಾಧ್ಯವಾದ ದುರ್ವಾಸನೆ!

ನೆರೆ ಹಿನ್ನೀರಿನಿಂದಾಗಿ ಭತ್ತ ಹತ್ತಿ ತೊಗರಿ ಬೆಳಗಳು ಕಪ್ಪಾಗಿ ಅಸ್ಥಿಪಂಜರದಂತೆ ಕಾಣುತ್ತಿವೆ. ಪ್ರವಾಹದೊಂದಿಗೆ ಬಂದಿದ್ದ ಜಲಚರಗಳು ಜಮೀನುಗಳಲ್ಲಿ ಸತ್ತು ಬಿದ್ದು ಕೊಳೆತು ಸಹಿಸಲಸಾಧ್ಯವಾದ ಗಬ್ಬುನಾತ ಹರಡಿದೆ.‌ ಜಮೀನುಗಳತ್ತ ತೆರಳಿದರೆ ಗಬ್ಬು ವಾಸನೆಗೆ ಮೂಗು ಉರಿಯುತ್ತದೆ. ದುರ್ವಾಸನೆಯಿಂದ ಕೃಷಿ ಚಟುವಟಿಕೆಗಳು ಮಾಡಲು ಆಗುತ್ತಿಲ್ಲ. ವಸತಿ ಪ್ರದೇಶದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿದ್ದಾರೆ. ಮಲಿನಗೊಂಡ ಜಮೀನುಗಳಿಗೆ ಏನು ಮಾಡಬೇಕು ಎಂದು ರೈತರು ಅಲವತ್ತುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.