ಶಹಾಪುರ: ರೈತರ ಶೋಷಣೆ ನಿಂತಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಒಣ ಪ್ರೀತಿ ಮತ್ತು ಅನುಕಂಪದ ಮಾತುಗಳು ಬೇಡ, ನ್ಯಾಯಯುತವಾಗಿ ಅವರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ನೀಡಿ ಎಂದು ಕುಂಬಾರ ಗೇರಿಮಠದ ಸೂಗೂರೇಶ್ವರ ಸ್ವಾಮೀಜಿ ತಿಳಿಸಿದರು.
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅನ್ನ ನೀಡುವ ನಾಡಿನ ರೈತರನ್ನು ಮತ್ತು ದೇಶ ಕಾಯುವ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು. ರೈತ ದೇಶದ ಬೆನ್ನೆಲುಬು ಎನ್ನುತ್ತಲೆ ನಿತ್ರಾಣಕ್ಕೆ ತಂದು ನಿಲ್ಲಿಸಿದ್ದಾರೆ. ರೈತರು ಸಹ ವೈಜ್ಞಾನಿಕ ಕೃಷಿಯತ್ತ ಮುಖ ಮಾಡಬೇಕು. ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಬರುವ ಕಡೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕ ಆರ್ ಪಾಟೀಲ ಮಾತನಾಡಿ, ‘ರೈತರು ಸುಭಿಕ್ಷೆಯಾಗಿದ್ದರೆ ನಾವೆಲ್ಲರೂ ಸುಭಿಕ್ಷೆಯಾಗಿರುತ್ತೇವೆ. ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳು ರೈತರು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದರು.
ಡಾ.ಎಂ.ಎಸ್ ಶಿರವಾಳ ಅವರು ವಿಶೇಷ ಉಪನ್ಯಾಸ ನೀಡಿ, ‘ರೈತರು ಕೃಷಿಯಿಂದ ವಿಮುಖವಾದರೆ ದೇಶದ ಪರಿಸ್ಥಿತಿ ಏನಾಗಬಹುದು? ಇಂದಿನ ಯುವಕರು ಗಂಭೀರವಾಗಿ ಚಿಂತಿಸಬೇಕು. ರೈತರ ಆತ್ಮಹತ್ಯೆಗೆ ಹಲವು ದಂತಹ ಗಂಭೀರ ಸಮಸ್ಯೆಗಳಿವೆ ಅವುಗಳ ಬಗ್ಗೆ ತಜ್ಞರು ಚಿಂತನೆ ಮಾಡಿ ಪರಿಹಾರದ ಮಾರ್ಗಸೂಚಿ ನಿಯಮಗಳನ್ನು ತಿಳಿಸುವುದರ ಜೊತೆಗೆ ಆತ್ಮಸ್ಥರ್ಯವನ್ನು ತುಂಬುವ ಕೆಲಸವಾಗಬೇಕು. ಅಸಹಾಯಕರ ಜೊತೆ ನಾವಿದ್ದೇವೆ ಎಂಬ ಸಂದೇಶ ರವಾನೆಯಾಗಬೇಕು
ಎಂದರು.
ಸಿದ್ದೇಶ್ವರ ಸ್ವಾಮೀಜಿ , ಜೆಡಿಎಸ್ ಮುಖಂಡ ಅಮಿನ್ ರೆಡ್ಡಿ ಪಾಟೀಲ ಯಾಳಗಿ, ರಾಯಪ್ಪಗೌಡ ದರ್ಶನಾಪುರ, ತಹಶೀಲ್ದಾರ್ ಜಗನ್ನಾಥ್ ರೆಡ್ಡಿ, ಮಹೇಶ್ ಗೌಡ ಸುಬೇದಾರ್, ಕಾಲೇಜಿನ ಡೀನ್ ಡಾ. ಲೊಕೇಶ, ಡಾ.ದಯಾನಂದ ಸಿ. ಪಾಟೀಲ, ಶ್ರೀಕಾಂತಗೌಡ ಸುಬೇದಾರ್, ಮಲ್ಲಣ್ಣ ಪರಿವಾಣ ಗೋಗಿ,
ವಾಸುದೇವ್ ಮೇಟಿ, ಚಂದ್ರ ಗೌಡ ಪಾಟೀಲ, ಸಿ.ಎಚ್. ರಾಮರಾವ್, ಡಾ.ಷಣ್ಮುಖ, ಮಹಾಂತಗೌಡ ಸುಬೇದರ್, ನಂದಣ್ಣ ಸಾವು, ಚೆನ್ನಯ್ಯ ಸ್ವಾಮಿ, ಹೊನ್ನಪ್ಪ, ಮೈಲಾರಪ್ಪ ಉರುಕಾಯಿ, ಕಾಳಪ್ಪ ಪತ್ತಾರ, ಮಹೇಶ್ ಗೌಡ ಸುಬೇದರ್, ಶೇಖರಪ್ಪ ಅರಿಕೇರಿ, ಬಸವರಾಜ ಸಿನ್ನೂರ್, ಬುದಿಯಪ್ಪ ಹುಲಿ, ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.