ಶಹಾಪುರ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ತಾಲ್ಲೂಕಿನ ಕೃಷ್ಣಾ ನದಿ ದಂಡೆಯ 23 ಹಳ್ಳಿಗಳಲ್ಲಿ ಒಂದು ವಾರ ಪ್ರವಾಹ ಉಂಟಾಗಿತ್ತು. ಈಗ ಕೃಷ್ಣೆ ಶಾಂತವಾಗಿದ್ದಾಳೆ. ಆದರೆ, ನದಿ ದಂಡೆಯ ರೈತರು ಮತ್ತೊಂದು ಸಮಸ್ಯೆ ಹಾಗೂ ಸವಾಲಿಗೆ ಸಜ್ಜಾಗಬೇಕಾಗಿದೆ.
ನದಿ ದಂಡೆಯಲ್ಲಿ ಸ್ಥಿರವಾಗಿ ಸ್ಥಾಪಿಸಿರುವ ಪಂಪ್ಸೆಟ್ ಸ್ಥಳಗಳು ಕೆಸರಿನಿಂದ ಆವೃತವಾಗಿವೆ. ನದಿಗೆ ನೀರು ಬಿಡುವ ಬಗ್ಗೆ ಸರಿಯಾದ ಮಾಹಿತಿ ರೈತರಿಗೆ ಸಿಗದ ಕಾರಣ ಪಂಪ್ಸೆಟ್ಗಳನ್ನು ಸ್ಥಳಾಂತರಿಸಿರಲಿಲ್ಲ. ಪ್ರವಾಹದಿಂದ ಪಂಪ್ಸೆಟ್ಗಳಿಗೆ ಜಾಲಿಗಿಡ ಹಾಗೂ ಜೇಡಿಮಣ್ಣು ಮೆತ್ತಿಕೊಂಡಿದೆ. ಅವೆಲ್ಲವನ್ನೂ ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ರೈತ ಶರಣಪ್ಪ.
ಅಲ್ಲದೆ ಪ್ರವಾಹದ ಸೆಳೆತಕ್ಕೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ವಿದ್ಯುತ್ ಪರಿವರ್ತಕ ಯಂತ್ರಗಳು(ಟಿ.ಸಿ) ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಅವೆಲ್ಲವನ್ನೂ ತ್ವರಿತವಾಗಿ ಬದಲಾಯಿಸಬೇಕು. ಪಂಪ್ಸೆಟ್ ಹಾಗೂ ವಿದ್ಯುತ್ ಸೌಕರ್ಯ ಯಥಾಸ್ಥಿಗೆ ತರಲು ಸುಮಾರು ₹ 10 ಸಾವಿರ ವೆಚ್ಚ ತಗುಲುತ್ತದೆ. ಪ್ರವಾಹದಿಂದ ಜಮೀನುಗಳಿಗೆ ಸಮರ್ಪಕವಾಗಿ ನೀರು ಸಿಗದ ಕಾರಣ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ತ್ವರಿತವಾಗಿ ರಸಗೊಬ್ಬರವನ್ನು ಹಾಕಬೇಕು ಎನ್ನುತ್ತಾರೆ ರೈತ ಮುಖಂಡ ಲಕ್ಷ್ಮಿಕಾಂತ ನಾಯಕ.
ಪ್ರವಾಹದಿಂದ 10 ವಿದ್ಯುತ್ ಕಂಬ ಬಿದ್ದಿವೆ. ಟಿ.ಸಿ.ಗೆ ಹಾನಿಯಾಗಿಲ್ಲ. ತ್ವರಿತವಾಗಿ ವಿದ್ಯುತ್ ಸಂಪರ್ಕ ಪೂರೈಸಲಾಗುವುದು. ರೈತರಲ್ಲಿ ಅನಗತ್ಯ ಗೊಂದಲ ಬೇಡ ಎಂದುಜೆಸ್ಕಾಂ ಅಧಿಕಾರಿ ಶಾಂತಪ್ಪ ಪೂಜಾರಿ ಹೇಳಿದರು.
ಪಂಪಸೆಟ್ ಹಾಗೂ ವಿದ್ಯುತ್ ಸೌಕರ್ಯವನ್ನು ಸಹಜ ಸ್ಥಿತಿಗೆ ತರಲು ₹ 10 ಸಾವಿರ ವೆಚ್ಚವಾಗುತ್ತದೆ. ಇದು ರೈತರಿಗೆ ಪ್ರವಾಹದ ಮತ್ತೊಂದು ಹೊಡೆತವು ಆಗಿದೆ ಎಂದುರೈತ ಮುಖಂಡ ಲಕ್ಷ್ಮಿಕಾಂತ ನಾಯಕ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.