ADVERTISEMENT

‘ಜಾನಪದ ಕಲೆಗಳ ಉಳಿವಿಗೆ ಶ್ರಮಿಸಿ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 5:10 IST
Last Updated 6 ಜನವರಿ 2022, 5:10 IST
ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮದಲ್ಲಿ ಗದಗ ಜಿಲ್ಲೆಯ ಕಲಾವಿದರು ನೃತ್ಯ ಪ್ರದರ್ಶನ ಮಾಡಿದರು
ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮದಲ್ಲಿ ಗದಗ ಜಿಲ್ಲೆಯ ಕಲಾವಿದರು ನೃತ್ಯ ಪ್ರದರ್ಶನ ಮಾಡಿದರು   

ಸಗರ (ಶಹಾಪುರ): ಆಧುನಿಕತೆಯ ಭರಾಟೆಯಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿನ ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಸಂಸ್ಕೃತಿಯ ಉಳಿವಿಗೆ ಪ್ರತಿಯೊಬ್ಬರೂ ಪಣ ತೊಡುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸಣ್ಣ ಗೌಡ ಮಾಲಿ ಪಾಟೀಲ ತಿಳಿಸಿದರು.

ತಾಲ್ಲೂಕಿನ ಸಗರ ಗ್ರಾಮದ ಚಾವಡಿ ಕಟ್ಟೆ ಆವರಣದಲ್ಲಿ ಅನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ನಡೆದ ‘ಜಾನಪದ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕಲೆಗಳಲ್ಲಿ ಗಾದೆ, ಒಗಟು, ಹಾಡು ಸೇರಿದಂತೆ ಅನೇಕ ಪ್ರಕಾರಗಳಿವೆ. ಜನಪದ ಕಲೆಗಳನ್ನು ಉಳಿಸಲು ಅನೇಕ ಮಹನೀಯರ ಶ್ರಮವಿದೆ. ಯುವಕರು ವಿದೇಶಿಯ ಪ್ರಭಾವ ಅನುಕರಣೆ ಮಾಡುತ್ತಿರುವ ಪರಿಣಾಮ ನಮ್ಮ ಗ್ರಾಮೀಣ ಜಾನಪದ ಕಲೆಗಳು ವಿನಾಶದತ್ತ ಹೆಜ್ಜೆ ಹಾಕುತ್ತಿವೆ. ಜಾನಪದ ಕಲೆ ಕೇವಲ ಮನರಂಜನೆ ನೀಡುವಂತದ್ದಲ್ಲ. ಅದರಲ್ಲಿ ಸಾಕಷ್ಟು ವಿಚಾರಧಾರೆಗಳು ಬದುಕುವ ದಾರಿಯನ್ನು ತೋರಿಸುವ ಮಾರ್ಗಗಳು ಅಡಗಿವೆ ಎಂದು ತಿಳಿಸಿದರು.

ADVERTISEMENT

ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಸಂಸ್ಕೃತಿಯನ್ನು ಕಲಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಹಿಂದೆ ತಾಯಿ ತನ್ನ ಮಗುವಿಗೆ ದೇಶಭಕ್ತಿ, ಸಮಾಜಸೇವೆ ಸೇರಿದಂತೆ ಹಲವು ಸಂಸ್ಕಾರವನ್ನು ನೀಡಿ ನಾಗರಿಕ ಸಮಾಜದಲ್ಲಿ ಸತ್ಪ್ರಜೆಯನ್ನಾಗಿ ಮಾಡುತ್ತಿದ್ದಳು. ಆದರೆ ಬದಲಾದ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಮೊಬೈಲ್ ಕೊಟ್ಟು ಸಮಾಧಾನ ಪಡಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರು.

ಮುಖಂಡರಾದ ಭೀಮರಾಯ ಶೆರಿ, ನಾಗಣ್ಣ ಜಾಹಿ, ಮಲ್ಲಣ್ಣ ಹೊಮ್ಮ, ಶಂಕ್ರಪ್ಪ ಪಾಗದ, ಕರಣಪ್ಪ, ಚನ್ನಬಸಪ್ಪ, ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿಣ್ಣುರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.