ಕೆಂಭಾವಿ: ಪಟ್ಟಣ ಸೇರಿದಂತೆ ಹಲವೆಡೆ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಶನಿವಾರ ಹಲವು ಬಡಾವಣೆಗಳಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಧಾರ್ಮಿಕ ವಿಧಿವಿಧಾನದ ಮೂಲಕ ವಿಘ್ನ ನಿವಾರಕನಿಗೆ ಪೂಜೆ ನೆರವೇರುತ್ತಿದೆ.
ಪಟ್ಟಣದಲ್ಲಿ ಸುಮಾರು 20 ರಿಂದ 25 ಸಾರ್ವಜನಿಕ ಗಣಪತಿಗಳು ಪ್ರತಿಷ್ಠಾಪನೆಗೊಂಡಿದ್ದು ನಿತ್ಯ ಪೂಜೆ ನಡೆಯುತ್ತಿದೆ. ಉತ್ತರಾದಿ ಮಠ, ಕಾಡಾ ಕ್ಯಾಂಪ್, ಹಿಲ್ಟಾಪ್ ಕಾಲೊನಿ, ಮ್ಯಾಗೇರಿ, ಸಂಜೀವನಗರ, ದೇವೂರ ಬಡಾವಣೆ, ಸಿದ್ದೇಶ್ವರ ದೇವಸ್ಥಾನ, ಲಕ್ಷ್ಮಿ ನಗರ, ಸಾಯಿ ನಗರ ಸೇರಿದಂತೆ ಇನ್ನುಳಿದ ಕೆಲವು ಬಡಾವಣೆ ಸೇರಿದಂತೆ ಹಲವೆಡೆ ವಿವಿಧ ಭಂಗಿಯ ಗಣಪತಿ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.
ಪಟ್ಟಣದ ಉತ್ತರಾದಿ ಮಠದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶ್ರೀ ಸತ್ಯಪ್ರಮೋದ ಯುವ ಸೇನೆಯಿಂದ ಪ್ರತಿಷ್ಠಾಪನೆಗೊಂಡಿರುವ ಪುಣೆಯ ದಗಡು ಸೇಠ್ ಮಾದರಿಯ ಗಣಪತಿ ಭಕ್ತರನ್ನು ಆಕರ್ಷಿಸುತ್ತಿದೆ. ಆರು ಅಡಿ ಎತ್ತರ ಮೂರು ಅಡಿ ಅಗಲವಿರುವ ಈ ಗಣಪತಿಯನ್ನು ನೋಡಲು ಜನತೆ ತಂಡೋಪತಂಡವಾಗಿ ಆಗಮಿಸುತ್ತಿದ್ದು ಐದು ದಿನದ ಗಣೇಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸ, ಉಚಿತ ಆರೋಗ್ಯ ಶಿಬಿರ, ಭಜನೆ, ನಾಟಕ, ಚಿಣ್ಣರ ನೃತ್ಯ, ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಆಟಗಳು ಸೇರಿದಂತೆ ನಿತ್ಯ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.