ADVERTISEMENT

ಯಾದಗಿರಿ: ಮಳೆ ನಡುವೆಯೂ ವಿಘ್ನೇಶನಿಗೆ ವಿದಾಯ

ಸಣ್ಣ ಕೆರೆ, ದೊಡ್ಡ ಕೆರೆ ಪುಷ್ಕರಣಿಗಳಲ್ಲಿ 5ನೇ ದಿನದ ಗಣೇಶ ಮೂರ್ತಿಗಳ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 7:29 IST
Last Updated 1 ಸೆಪ್ಟೆಂಬರ್ 2025, 7:29 IST
ಯಾದಗಿರಿಯ ಸಣ್ಣ ಕೆರೆ ಸಮೀಪದ ಪುಷ್ಕರಣಿಯಲ್ಲಿ ಭಾನುವಾರ ಪೌರಕಾರ್ಮಿಕರೊಬ್ಬರು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದರು
ಯಾದಗಿರಿಯ ಸಣ್ಣ ಕೆರೆ ಸಮೀಪದ ಪುಷ್ಕರಣಿಯಲ್ಲಿ ಭಾನುವಾರ ಪೌರಕಾರ್ಮಿಕರೊಬ್ಬರು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದರು   

ಯಾದಗಿರಿ: ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಐದನೇ ದಿನವಾದ ಭಾನುವಾರ ಗಣೇಶ ವಿಸರ್ಜನೆಯನ್ನು ಮಳೆಯ ನಡುವೆಯೂ ಸಂಭ್ರಮದ ಮೆರವಣಿಗೆಯೊಂದಿಗೆ ನೆರವೇರಿಸಲಾಯಿತು.

ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸಿ, ಪೂಜಿಸಿದ ಮಂಗಲ ಮೂರ್ತಿಗೆ ಭಕ್ತರು ಭಕ್ತಿಯ ವಿದಾಯ ಹೇಳಿ ನಮಿಸಿದರು.

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಭಾನುವಾರ ಸಂಜೆವರೆಗೂ ವಿರಾಮ ನೀಡಿದ್ದರೂ 7ರ ಸುಮಾರಿಗೆ ಮತ್ತೆ ಸುರಿಯತೊಡಗಿತು. ಈ ವೇಳೆ ಭಕ್ತರು ಗಣೇಶ ಮೂರ್ತಿಗೆ ಕೊಡೆ ಹಿಡಿದುಕೊಂಡು ಮೆರವಣಿಗೆಯನ್ನು ಮುಂದುವರಿಸಿದರು. ಕೆಲವು ವಾಹನಗಳಲ್ಲಿನ ಮೂರ್ತಿಗಳಿಗೆ ಪ್ಲಾಸ್ಟಿಕ್‌ ಹಿಡಿದಿದ್ದು ಕಂಡುಬಂತು.

ADVERTISEMENT

ಮತ್ತೊಂದೆಡೆ, ಕೆಲವು ಯುವಕರು, ಮಕ್ಕಳು ಹಣೆಗೆ ಕೇಸರಿ ಬಟ್ಟೆ ಕಟ್ಟಿಕೊಂಡು ಮಳೆಯನ್ನು ಲೆಕ್ಕಿಸದೆ ಡಿ.ಜೆ. ಹಾಡು, ಬ್ಯಾಂಡ್ ಬಾಜಾ, ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಗುಲಾಲ್ ಎರಚಿಕೊಂಡು ಸಂಭ್ರಮಿಸಿದರು.

ಯಾದಗಿರಿಯಲ್ಲಿ ಭಾನುವಾರ ಭಕ್ತರು ವಿಸರ್ಜನೆಗಾಗಿ ಹೊತ್ತು ತಂದಿದ್ದ ಗಣೇಶ ಮೂರ್ತಿಗಳು  

ಮಹಿಳೆಯರೂ ಸಂಗೀತ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ‘ಗಣಪತಿ ಬಪ್ಪ ಮೋರೆಯಾ...’ ಜೈಕಾರವೂ ಮೆರವಣಿಗೆ ಉದ್ದಕ್ಕೂ ಮೊಳಗಿದವು. ಪಟ್ಟಾಕಿ ಸದ್ದು ಸಹ ಜೋರಾಗಿತ್ತು.

ಸಾವಿರಾರು ಭಕ್ತರು ಭಕ್ತಿ– ಭಾವದಿಂದ ಸಣ್ಣ ಮೂರ್ತಿಗಳನ್ನು ತಲೆಯ ಮೇಲೆ ಹೊತ್ತುಕೊಂಡು, ತಳ್ಳುವ ಬಂಡಿಯಲ್ಲಿ ಇರಿಸಿಕೊಂಡು, ಕೆಲವರು ವಾಹನಗಳ ಮೇಲೆ ಇರಿಸಿಕೊಂಡು ಸಣ್ಣ ಕೆರೆ (ಲುಂಬಿನ ಉದ್ಯಾನ) ಸಮೀಪ ಹಾಗೂ ದೊಡ್ಡ ಕೆರೆ ಬಳಿಯ ಪುಷ್ಕರಣಿಗಳಿಗೆ ಬಂದರು. ಯುವಕ ಮಂಡಳಿಯವರು ದೊಡ್ಡ ಮೂರ್ತಿಗಳನ್ನು ತೆರೆದ ವಾಹನಗಳಲ್ಲಿ ಇರಿಸಿಕೊಂಡು ತಂದರು.

ರಸ್ತೆಯ ಬದಿಯಲ್ಲಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಲಾಯಿತು. ವಿಸರ್ಜನೆಗಾಗಿ ನಿಯೋಜನೆಗೊಂಡಿದ್ದ ನಗರಸಭೆಯ ಸಿಬ್ಬಂದಿ ಅಲಂಕಾರಿಕ ವಸ್ತುಗಳು, ಹೂಗಳನ್ನು ಬದಿಯಲ್ಲಿ ಹಾಕಿದರು. ಬಳಿಕ ಮೂರ್ತಿಗಳನ್ನು ಪುಷ್ಕರಣಿಯ ನೀರಿನಲ್ಲಿ ಬಿಟ್ಟರು. ದೊಡ್ಡ ಮೂರ್ತಿಗಳನ್ನು ದೊಡ್ಡ ಕ್ರೇನ್‌ಗಳನ್ನು ಬಳಸಿ ಪುಷ್ಕರಣಿಗಳಲ್ಲಿ ವಿಸರ್ಜನೆ ಮಾಡಲಾಯಿತು.

ಯಾದಗಿರಿ ನಗರದ ಸಣ್ಣ ಕೆರೆ ಸಮೀಪದ ಪುಷ್ಕರಣಿಗೆ ಭಾನುವಾರ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಭೇಟಿ ನೀಡಿ ಮೂರ್ತಿಗಳ ವಿಸರ್ಜನೆ ಪರಿಶೀಲಿಸಿದರು

ಮೂರ್ತಿಗಳನ್ನು ವಿಸರ್ಜನೆಗೆ ಕೊಂಡೊಯ್ಯುವ ಮುನ್ನ ಪ್ರತಿಷ್ಠಾಪನೆಯ ಸ್ಥಳದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಚೌತಿ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮೂರ್ತಿಯ ಮುಂದೆ ಇರಿಸಲಾದ ದೊಡ್ಡ ಲಡ್ಡು ಹರಾಜು ಮೂಲಕ ಭಕ್ತರಿಗೆ ನೀಡಲಾಯಿತು. ಹಲವೆಡೆ ನಿರಂತರ ಅನ್ನದಾನ ವ್ಯವಸ್ಥೆ ಮಾಡಿದ್ದು ಕಂಡುಬಂತು.

ಯಾದಗಿರಿಯ ಲಕ್ಷ್ಮಿ ನಗರದಲ್ಲಿ ವೀರಕೇಸರಿ ಗಜಾನನ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ದರ್ಶನವನ್ನು ಭಾನುವಾರ ಮಹಿಳೆಯರು ಮಕ್ಕಳು ಪಡೆದರು
ಬಿಗಿ ಪೊಲೀಸ್ ಬಂದೋಬಸ್ತ್‌
ಗಣೇಶ ಮೂರ್ತಿ ವಿಸರ್ಜನೆ ವೇಳೆ ಅಹಿತಕರ ಘಟನೆಗಳು ನಡೆಯುದಂತೆ ತಡೆಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲಾದ ಮೂರ್ತಿಗಳ ಮೆರವಣಿಗೆಯಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜನೆ ಮಾಡಲಾಯಿತು. ಸಣ್ಣ ಕೆರೆಯ ಹೊಸಳ್ಳಿ ಮತ್ತು ಗಾಂಧಿ ಚೌಕ್‌ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಯಿತು. ಮೂರ್ತಿ ವಿಸರ್ಜನೆಯ ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಯಿತು.
ಯಾದಗಿರಿಯ ಬಸವೇಶ್ವರ ನಗರದಲ್ಲಿ ಬಾಲ ಗಣೇಶ ಮಂಡಳಿ ವತಿಯಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು
15ಕ್ಕೂ ಹೆಚ್ಚು ಪೌರಕಾರ್ಮಿಕರ ನಿಯೋಜನೆ
ಪುಷ್ಕರಣಿಯಲ್ಲಿ ಮೂರ್ತಿ ವಿಸರ್ಜನೆಗಾಗಿ ನಗರಸಭೆಯ 15ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ನಿಯೋಜನೆ ಮಾಡಲಾಗಿತ್ತು. ಪುಷ್ಕರಣಿ ಬದಿಯಲ್ಲಿ ಭಕ್ತರ ತಂದಿದ್ದ ಮೂರ್ತಿಗಳನ್ನು ಪಡೆದು ಹೂವುಗಳನ್ನು ತೆಗೆದು ನೀರಿನಲ್ಲಿ ವಿಸರ್ಜನೆ ಮಾಡಿದರು. ಪುಷ್ಕರಣಿಗೆ ಭೇಟಿ ನೀಡಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ‘ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಗರಸಭೆಯಿಂದ ಸಕಲ ವ್ಯವಸ್ಥೆವನ್ನು ಮಾಡಲಾಗಿದೆ. ಎಲ್‍ಇಡಿ ಲೈಟ್ ಮಾಡಿ ದೊಡ್ಡ ಕ್ರೇನ್‍ಗಳ ವ್ಯವಸ್ಥೆ ಮಾಡಲಾಗಿದೆ. 15ಕ್ಕೂ ಹೆಚ್ಚು ಪೌರಕಾರ್ಮಿಕರು ಆರೋಗ್ಯ ನಿರೀಕ್ಷಕರ ನಿಯೋಜನೆ ಮಾಡಲಾಗಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು. ಈ ವೇಳೆ ಪರಿಸರ ಎಂಜಿನಿಯರ್ ಪ್ರಶಾಂತ್ ಪ್ರಮುಖರಾದ ಭೀಮಣ್ಣ ಕೆ.ವೈದ್ಯ ಎಸ್‌.ಐ ಶಿವಪುತ್ರ‌ ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.