ADVERTISEMENT

ಕರ್ನಾಟಕದ ನರ್ಸ್‌ಗಳಿಗೆ ಜಾಗತಿಕ ಬೇಡಿಕೆ

ಶುಶ್ರೂಷಾ ವಿದ್ಯಾರ್ಥಿಗಳ ದೀಪದಾರೆ, ಪ್ರತಿಜ್ಞಾವಿಧಿ ಸ್ವೀಕಾರ; ಶ್ರೀಕಾಂತ್ ಫುಲಾರಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:26 IST
Last Updated 1 ಫೆಬ್ರುವರಿ 2026, 6:26 IST
ಯಾದಗಿರಿಯ ಯಿಮ್ಸ್‌ನಲ್ಲಿ ಶನಿವಾರ ನಡೆದ ದೀಪದಾರೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (ನರ್ಸಿಂಗ್‌ ಶಿಕ್ಷಣ) ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲಾರಿ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು
ಯಾದಗಿರಿಯ ಯಿಮ್ಸ್‌ನಲ್ಲಿ ಶನಿವಾರ ನಡೆದ ದೀಪದಾರೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (ನರ್ಸಿಂಗ್‌ ಶಿಕ್ಷಣ) ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲಾರಿ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು   

ಯಾದಗಿರಿ: ‘ಕ್ಲಿನಿಕಲ್‌, ಅತ್ಯುತ್ತಮ ಸಂವಹನ ಕೌಶಲ ಬೆಳೆಸಿಕೊಂಡ ಕರ್ನಾಟಕದ ನರ್ಸ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಬಹಳ ಬೇಡಿಕೆ ಇದೆ’ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (ನರ್ಸಿಂಗ್‌ ಶಿಕ್ಷಣ) ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲಾರಿ ಹೇಳಿದರು.

ನಗರ ಹೊರವಲಯದ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಯಿಮ್ಸ್‌) ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ದೀಪದಾರೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಅತಿಹೆಚ್ಚು ನರ್ಸ್‌ಗಳು ಕರ್ನಾಟಕದಿಂದ ತೇರ್ಗಡೆಯಾಗಿತ್ತಿದ್ದಾರೆ. 800ಕ್ಕೂ ಹೆಚ್ಚು ಜಿಎನ್‌ಎಂ ಹಾಗೂ 696 ನರ್ಸಿಂಗ್‌ ಕಾಲೇಜುಗಳಿಂದಾಗಿ ಪ್ರತಿ ವರ್ಷ ಸುಮಾರು 40 ಸಾವಿರ ನರ್ಸ್‌ಗಳು ಹೊರ ಬರುತ್ತಿದ್ದಾರೆ. ಹೀಗಾಗಿ, ಹೊರ ರಾಷ್ಟ್ರದವರು ನರ್ಸ್‌ಗಳನ್ನು ಕಳುಹಿಸುವಂತೆ ಕರ್ನಾಟಕಕ್ಕೆ ಬಂದಿದ್ದು, ವೈದ್ಯಕೀಯ ಶಿಕ್ಷಣ ಸಚಿವರ ಜೊತೆಗೆ ಮಾತುಕತೆ ನಡೆಸಿದ್ದಾರೆ’ ಎಂದರು.

ADVERTISEMENT

‘ಕೇರಳ, ಪಶ್ಚಿಮ ಬಂಗಾಳ, ಓಡಿಸಾ, ರಾಜಸ್ಥಾನ, ಗುಜರಾತ್ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ನರ್ಸಿಂಗ್ ಕಲಿಯುತ್ತಿದ್ದಾರೆ. ಕರ್ನಾಟಕದವರಿಗೆ ಹೆಚ್ಚಿನ ಉತ್ತೇಜನ ಕೊಡಲು ವೈದ್ಯಕೀಯ ಶಿಕ್ಷಣ ಸಚಿವರು 32 ಸರ್ಕಾರಿ ನರ್ಸಿಂಗ್ ಕಾಲೇಜುಗಳನ್ನು ತೆರೆದಿದ್ದಾರೆ. ಈ ವರ್ಷ ಹೊಸದಾಗಿ ನಾಲ್ಕು ಕಾಲೇಜುಗಳನ್ನು ಕೊಟ್ಟಿದ್ದಾರೆ. 2,000 ಇದ್ದ ಸರ್ಕಾರಿ ಸೀಟುಗಳನ್ನು 3,580 ಮಾಡಿದ್ದರೂ ಅಷ್ಟೂ ಸೀಟುಗಳು ಭರ್ತಿಯಾಗಿವೆ’ ಎಂದು ಹೇಳಿದರು.

‘ನರ್ಸಿಂಗ್ ಕೋರ್ಸ್‌ ಮುಗಿಸಿದವರಿಗೆ 100 ಪರ್ಸೆಂಟ್ ಉದ್ಯೋಗ ಖಚಿತ. ವಿದ್ಯಾರ್ಥಿಯಾಗಿದ್ದಾಗಲೇ ನರ್ಸ್‌ಗಳಿಗೆ ಬೇಡಿಕೆ ಇದ್ದು, ಆಸ್ಪತ್ರೆಗಳು ಕೆಲಸ ಕೊಡಲು ಕಾದುಕುಳಿತಿವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಪೂರ್ಣವಾಗಿ ಕಲಿಯಬೇಕು. ಸ್ಥಳೀಯವಾಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಬದಲು ಹೊರರಾಷ್ಟ್ರಗಳ ದೊಡ್ಡ ಆಸ್ಪತ್ರೆಗಳಲ್ಲಿ ನರ್ಸ್‌ಗಳಾಗುವ ಗುರಿ ಇರಿಸಿಕೊಳ್ಳಬೇಕು’ ಎಂದರು.

‘ಯಿಮ್ಸ್’ ಮುಖ್ಯಸ್ಥ ಡಾ.ಸಂದೀಪ್ ಹರಸಂಗಿ ಮಾತನಾಡಿ, ‘ರೋಗಿಗಳ ಚಿಕಿತ್ಸೆಯಲ್ಲಿ ನರ್ಸ್‌ಗಳ ಪಾತ್ರ ಹಿರಿದಾಗಿದೆ. ಇಡೀ ದಿನ ಅವರ ಜೊತೆಗೆ ಇದ್ದು ಆರೋಗ್ಯದ ಮೇಲೆ ನಿಗಾ ಇರಿಸುವ ನಿಮ್ಮನ್ನು ಕೇಳಿಯೇ ವೈದ್ಯರು ಚಿಕಿತ್ಸೆ ಕೊಡಬೇಕಾಗುತ್ತದೆ. ಒಂದು ರೀತಿಯಲ್ಲಿ ಆಸ್ಪತ್ರೆಗೆ ನೀವೇ ಬಾಸ್ ಇದ್ದಂತೆ’ ಎಂದು ಹೇಳಿದರು.

‘ನರ್ಸಿಂಗ್ ಕೋರ್ಸ್‌ಗಳು ಬಂದಿದ್ದರಿಂದ ರೋಗಿಗಳ ಆರೈಕೆಯಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ. ವಿದ್ಯಾರ್ಥಿ ದೆಸೆಯಿಂದಲೇ ಪ್ರಾಯೋಗಿಕವಾಗಿ ಕಲಿಯುವ ಹೇರಳ ಅವಕಾಶ ಸರ್ಕಾರಿ ಕಾಲೇಜುಗಳಲ್ಲಿ ಬಿಟ್ಟರೆ ಖಾಸಗಿ ಕಾಲೇಜುಗಳಲ್ಲಿ ಸಿಗುವುದಿಲ್ಲ’ ಎಂದರು.

ಪ್ರಾಚಾರ್ಯ ಸಿದ್ದರಾಮಪ್ಪ ಸಜ್ಜನ ಅವರು ಪ್ರತಿಜ್ಞಾವಿಧಿ ಬೋಧಿಸಿದರು. 

ಸಂಸ್ಥೆಯ ಅಧೀಕ್ಷಕ ಡಾ.ಸಂತೋಷ ಲಕ್ಷ್ಮಣ, ಯಿಮ್ಸ್ ಪ್ರಾಚಾರ್ಯರಾದ ನವಾಜ್ ಉಮರ್, ಹಣಕಾಸು ಸಲಹೆಗಾರ ಕಾಶಿನಾಥ ಅಲ್ಲೂರ್, ಜಿಲ್ಲಾ ಶಸ್ತ್ರಚಿಕಿತ್ಸಕಿ ರಿಜ್ವಾನ್ ಆಫ್ರೀನ್, ಎಂಸಿಎಚ್‌ ಆಸ್ಪತ್ರೆ ವಿಶೇಷ ಅಧಿಕಾರಿ ಡಾ.ಶಿವಕುಮಾರ, ನೋಡಲ್ ಅಧಿಕಾರಿ ಡಾ.ಪಂಪಾರೆಡ್ಡಿ ಬಿ.ಕೊಲ್ಲೂರು, ನರ್ಸಿಂಗ್ ಅಧೀಕ್ಷಕಿ ಈರಮ್ಮ ಶಿಂಧೆ ಉಪಸ್ಥಿತರಿದ್ದರು.

‘ವಿದೇಶಿ ಭಾಷೆಗಳ ಕಲಿಕೆ’ ‘

ಕರ್ನಾಟಕದಿಂದ ನರ್ಸ್‌ಗಳನ್ನು ಕಳುಹಿಸಿಕೊಡುವಂತೆ ಜಪಾನ್ ಜರ್ಮನ್ ಫ್ರಾನ್ಸ್ ಇಟಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಬೇಡಿಕೆ ಬರುತ್ತಿದೆ. ಹೊರ ರಾಷ್ಟ್ರಗಳಿಗೆ ಹೋಗಿ ನರ್ಸ್‌ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗಲು ಸರ್ಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ವಿದೇಶದ ಭಾಷೆಗಳನ್ನು ಕಲಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (ನರ್ಸಿಂಗ್‌ ಶಿಕ್ಷಣ) ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲರಿ ಹೇಳಿದರು. ‘ಸರ್ಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಓದುವವರಿಗೆ ಹೊರ ದೇಶದವರು ಉದ್ಯೋಗ ಕೊಡುವ ಬೇಡಿಕೆ ಇರಿಸಿದ್ದಾರೆ. ಅವರ ದೇಶದ ಭಾಷೆಗಳನ್ನು ಕೌಶಲಾಭಿವೃದ್ಧಿ ಇಲಾಖೆಯಿಂದ ಕಲಿಸಲು ₹ 2.50 ಕೋಟಿ ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಭಾಷೆ ಕಲಿಕೆ ತರಗತಿಗಳು ಆರಂಭವಾಗಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.