ಶಹಾಪುರ: ಪ್ರಸ್ತುತ ದಿನಗಳಲ್ಲಿ ಸರ್ಕಾರದಿಂದ ಶೋಷಿತ ಸಮುದಾಯಗಳಿಗೆ ಸಿಗುವ ಸೌಲಭ್ಯಗಳ ಕುರಿತು ಜನರಿಗೆ ಅರಿವು ಮೂಡಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಬೇಕು ಎಂದು ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನ ಜ್ಙಾನಪ್ರಕಾಶ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ ಜಯಂತ್ಯುತ್ಸವ ಹಾಗೂ ಗೌತಮ ಬುದ್ಧ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಶೋಷಿತರು ಅಧಿಕಾರ ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಮೂಲ ಕಾರಣ ಇವರಿಗೆ ಮತದಾನದ ಬೆಲೆ ಗೊತ್ತಾಗುತ್ತಿಲ್ಲ. ಶಿಕ್ಷಣದಲ್ಲಿ ಸಾಧನೆ ಮಾಡುವಲ್ಲಿ ಹಿನ್ನಡೆ ಅನುಭವಿ ಸುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಮಾಜಿ ಶಾಸಕ ಗುರು ಪಾಟೀಲ ಮಾತನಾಡಿ, ಮೊದಲು ನಮ್ಮ ಸಮಾಜದಲ್ಲಿರುವ ಅಸ್ಪೃಶ್ಯತೆ ಅಳಿಸಿ ಹಾಕಬೇಕು. ಬುದ್ಧನ ತತ್ವದಲ್ಲಿ ಎಲ್ಲ ಅನಿಷ್ಟ ಪದ್ಧತಿ ಅಳಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಬಂತೇಜಿ ಆದಿತ್ಯ, ಸಾರಿಪುತ್ರ, ಸಂಗಪಾಲ ಹಾಗು ಬೋಧಿನಂದ, ಪ್ರಮುಖರಾದ ಮಲ್ಲಪ್ಪ ಬೀರನೂರ, ಚಂದಪ್ಪ ಸೀತಿನಿ, ಮಲ್ಲಪ್ಪ ಉಳಂಡಗೇರಿ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಬಾಬುಗೌಡ ಭೂತಾಳಿ, ಮಲ್ಲಣ್ಣ, ಜೈಭೀಮ, ಬುದ್ದಘೋಷ ದೇವಿಂದ್ರ ಹೆಗ್ಗಡೆ, ರವಿಂದ್ರನಾಥ ಹೊಸ್ಮನಿ, ಶಂಕರ ಸಿಂಘೆ, ಚಂದಪ್ಪ ಗೌಡ, ಚನ್ನಪ್ಪಗೌಡ ಹೋತಪೇಟೆ, ಖಾಜಾಸಾಬ್, ಶ್ರೀಶೈಲ ಹೊಸಮನಿ, ರವಿಕುಮಾರ್ ಮೂಲಿಮನಿ, ಹಣುಮಂತ, ಬೌದ್ಧ ಉಪಾಸಕರಾದ ಮಲ್ಲಪ್ಪ ಕಾಂಬ್ಳೆ ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.