ಯಾದಗಿರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗಾಗಿ ಚಿಯಾ ಬೆಳೆ ಬೇಸಾಯ ಕುರಿತುಶುಕ್ರವಾರ ತರಬೇತಿ ಕಾರ್ಯಕ್ರಮ ನಡೆಯಿತು.
ವಿಸ್ತರಣಾ ಘಟಕದ ಮುಖ್ಯಸ್ಥ ಡಾ.ರೇವಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಚಿಯಾ ಬೆಳೆಯನ್ನು ಚಳಿಗಾಲದಲ್ಲಿ ಬೆಳೆಯಲು ಸೂಕ್ತ ಸಮಯವಾಗಿದೆ. ಈ ಬೆಳೆಎಲ್ಲ ತರಹದ ಮಣ್ಣುಗಳಲ್ಲಿ ಬೆಳೆಯಬಹುದು. ರಾಸಾಯನಿಕ ಗೊಬ್ಬರವಿಲ್ಲದೆ ಕಡಿಮೆ ಖರ್ಚು, ಕಡಿಮೆ ನೀರು, ಕಡಿಮೆ ಶ್ರಮದಿಂದ ಬೆಳೆಯಬಹುದಾಗಿದೆ’ ಎಂದರು.
‘ಈ ಬೆಳೆಯ ಎಲ್ಲ ಭಾಗಗಳು (ಎಲೆ, ಕಾಂಡ, ಬೀಜ) ಬಹು ಉಪಯೋಗಿಯಾಗಿವೆ. ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಬೆಳೆಯಲ್ಲಿ ಯಾವುದೇ ಹೆಸರಿನ ತಳಿಗಳು ಅಭಿವೃದ್ಧಿಗೊಂಡಿಲ್ಲವಾದರೂ ವಿವಿಧ ಬಣ್ಣದ (ಕಪ್ಪು ಕಂದು, ತಿಳಿ ಹಸಿರು) ಬೀಜಗಳು ಲಭ್ಯ ಇವೆ. ಬಿಳಿ ಬಣ್ಣದ ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದೆ. ಚಿಯಾ ಬೀಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಬೇಕಾಗುವ ವಿಟಾಮಿನ್ಗಳು, ಆಂಟಿ ಆಕ್ಸಿಡೆಂಟ್ಸ್ ಹಾಗೂ ಲವಣಗಳನ್ನು ಹೊಂದಿದೆ’ ಎಂದು ತಿಳಿಸಿದರು.
‘ಒಮೆಗಾ-3 ಹಾಗೂ ಒಮೆಗಾ-6 ಕೊಬ್ಬಿನಾಂಶಗಳು ಮಾಂಸಹಾರದಲ್ಲಿ ಮಾತ್ರ ಲಭ್ಯವಿದ್ದು, ಇವುಗಳಿಗಾಗಿ ಚಿಯಾ ಬೆಳೆಯಿಂದ ಹೆರಳವಾಗಿ ಪಡೆಯಬಹುದಾಗಿದೆ’ ಎಂದು ತಿಳಿಸಿದರು.
‘ಚಿಯಾ ಬೀಜಗಳು ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಈ ಬೆಳೆಯು 4 ತಿಂಗಳ ಅವಧಿಯಲ್ಲಿ ಬೆಳೆಯಬಹುದು. ಜತೆಗೆ ಹೆಚ್ಚಿನ ಲಾಭ ಗಳಿಸುವ ಅಂತರರಾಷ್ಟ್ರೀಯ ಬೆಳೆಯಾಗಿದೆ. ಈ ಬೆಳೆಯ ಬೀಜಗಳನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತಿದೆ’ ಎಂದರು.
ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ ಅವರು ಚಿಯಾ ಬೆಳೆಗೆ ಬರುವ ರೋಗ ಹಾಗೂ ಕೀಟಗಳ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು. ತರಬೇತಿಯಲ್ಲಿ 35 ರಿಂದ 40 ರೈತರು ಭಾಗವಹಿಸಿ ಸದುಪಯೋಗ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.