ಯಾದಗಿರಿ: ‘ಶಿಕ್ಷಕರು ಮಕ್ಕಳ ಮನಸ್ಸು ಅರಿತು, ಅವರ ಕಲಿಕಾ ಮಟ್ಟಕ್ಕೆ ಇಳಿದು ಪಾಠ ಮಾಡಬೇಕು. ಶಿಕ್ಷಕರು ಸದಾ ಕಾಲ ವಿದ್ಯಾರ್ಥಿಯಾಗಬೇಕು’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸೃಜನಶೀಲ ಅಧ್ಯಾಪನ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೌಢ ಶಾಲಾ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ನೂತನ ಶಿಕ್ಷಣ ನೀತಿ ಮತ್ತು ಪ್ರಚಲಿತ ಶಿಕ್ಷಣದ ಸವಾಲುಗಳ ಕುರಿತು ಮಾತನಾಡಿದರು.
ತಾವು ವಿದ್ಯಾರ್ಥಿಯಾಗಿದ್ದಾಗ ತಮ್ಮ ಶಿಕ್ಷಕರಿಂದ ಏನು ಬಯಸುತ್ತಿದ್ದೀರಿ ಎಂಬುವುದು ಅರ್ಥವಾದರೆ ಇಂದಿನ ಮಕ್ಕಳಿಗೆ ಏನು ಬೋಧನೆ ಮಾಡಬಹುದು ಎಂಬುವುದು ಅರ್ಥವಾಗುತ್ತದೆ. ಮಕ್ಕಳ ಮನಸ್ಸುನ್ನು ನಿರ್ಮಾಣ ಮಾಡುವುದೇ ಶಿಕ್ಷಣದ ಮೂಲ ತತ್ವ. ಶಿಸ್ತು, ಪ್ರೀತಿಯೂ ಇರಬೇಕು. ಮಕ್ಕಳು ಶಿಕ್ಷಕರು ಹೇಳಿದ ಹಾಗೆ ಮಕ್ಕಳು ಮಾಡುವುದಿಲ್ಲ. ಆದರೆ, ಮಾಡಿದ ಹಾಗೆ ಮಾಡುತ್ತಾರೆ. ಇದನ್ನು ಶಿಕ್ಷಕರು ಅರಿತುಕೊಂಡಾಗ ಮಾತ್ರ ಈ ಭಾಗ ಶಿಕ್ಷಣದಲ್ಲಿ ಅಭಿವೃದ್ಧಿಯೊಂದಲು ಸಾಧ್ಯ ಎಂದು ಹೇಳಿದರು.
ನಮ್ಮ ದೇಶದ ಸಂಸ್ಕೃತಿಯ ಉತ್ತಮ ಮೌಲ್ಯಗಳು, ಸದ್ಗುಣ, ಸ್ಪೂರ್ತಿಯು ವಿಶ್ವಮಾನ್ಯವಾಗಿದೆ. ಅವುಗಳನ್ನು ಶಿಕ್ಷಕರು ಮಕ್ಕಳಗೆ ತಿಳಿಸಿಕೊಡುವುದರ ಮೂಲಕ ಶಿಕ್ಷಣದಲ್ಲಿ ಮೌನ ಕಾಂತ್ರಿಯಾಗಬೇಕು ಎಂದರು.
ನಾನು ಚಿಕ್ಕವನಿದ್ದಾಗ ನನ್ನ ಮನಸ್ಸಿಗೆ ಅತಿ ಹೆಚ್ಚಿನ ರೀತಿಯಲ್ಲಿ ಪ್ರಭಾವ ಬೀರಿದವರಲ್ಲಿ ಅಕ್ಕ ಮತ್ತು ಅಜ್ಜ. ಇತರರಿಗೆ ದ್ವೇಷ ಸಾಧಿಸದಿರುವುದು, ಶತ್ರುವಿಗೂ ತೊಂದರೆ ಕೊಡದಿರುವುದು, ಸದಾ ಕಾಲ ಕಲಿಕೆ, ಹೀಗೆ ಆಕೆ ಹೇಳಿಕೊಟ್ಟ ಅನೇಕ ನೈತಿಕ ಮೌಲ್ಯಗಳು, ಶಿಕ್ಷಣದ ವಿಷಯಗಳು ನನಗೆ ಸ್ಫೂರ್ತಿಯಾಗಿವೆ ಎಂದು ಶಿಕ್ಷಕರೊಂದಿಗೆ ಕರಜಗಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಈ ವೇಳೆ ಡಯಟ್ ಪ್ರಾಂಶುಪಾಲ ಕೆ.ಡಿ.ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ, ವಿಕಾಸ ಅಕಾಡೆಮಿ ಸಂಚಾಲಕ ಸೋಮಶೇಖರ ಮಣ್ಣೂರ, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಂದೀಪ್, ಜಿಲ್ಲಾ ಸಂಯೋಜಕ ಆನಂದ ಬೆಳಿಗೇರಾ, ದೇವಿಂದ್ರರೆಡ್ಡಿ ಕುಮನೂರ, ತಾಲ್ಲೂಕು ಸಂಯೋಜಕ ಭೀಮರಾಯ ಹತ್ತಿಕುಣಿ, ತಿಮ್ಮಣ್ಣ ನಾಯಕ, ಶಿವರಾಜಪ್ಪಗೌಡ, ಕುಸುಮಾವತಿ, ಅಕ್ಷಯ, ಭರತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.