ಯಾದಗಿರಿ: ಹನುಮಾನ್ ಜಯಂತಿ ಅಂಗವಾಗಿ ಇಲ್ಲಿನ ವಾಲ್ಮೀಕಿ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಜಯಂತಿ ಆಚರಿಸಲಾಯಿತು. ವಾರ್ಡ್ ನಂ. 22 ಸದಸ್ಯ ಹನುಮಂತ ನಾಯಕ, ನಗರ ಠಾಣೆಯ ಪಿಎಸ್ಐ ಕೃಷ್ಣಾ ಸುಬೇದಾರ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಾಲ್ಮೀಕಿ ನಾಯಕ ಸಮಾಜದ ಯುವಕರು ವಾರ್ಡ್ ನಂ. 22ರ ಮೊಶೆಮ್ಮ ಗುಡಿಯಿಂದ ದ್ಯಾವಮ್ಮ ದೇವಸ್ಥಾನವರೆಗೆ ಹಾಗೂ ದಂಡಗುಂಡ ಬಸವಣ್ಣ ದೇವಸ್ಥಾನದಿಂದ ಗಾಂಧಿವೃತ್ತ ಮುಖ್ಯ ರಸ್ತೆ ವರೆಗೆ ಸ್ವಚ್ಛತೆ ಮಾಡಲಾಯಿತು. ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿ, ಬಡಾವಣೆ ಜನರಿಗೆ ಕೊರೊನಾ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ಹನುಮಂತ ನಾಯಕ, ಕೊರೊನಾ ವೈರಸ್ ತಡೆಯಲು ಸಾಮಾಜಿಕ ಅಂತರ, ಸ್ವಚ್ಛತೆ ಅಗತ್ಯ. ವಾರ್ಡ್ ಹಾಗೂ ಸುತ್ತಮುತ್ತಲ ವಾರ್ಡ್ನ ಯುವಕರು ಶ್ರಮದಾನ ಮಾಡುವ ಮೂಲಕ ವಿಭಿನ್ನವಾಗಿ ಕೊರೊನಾ ವಿರುದ್ಧ ಸ್ವಚ್ಛತೆಯ ಕಾರ್ಯ ಕೈಗೊಂಡಿದ್ದು, ಮಾದರಿಯಾಗಿದೆ ಎಂದು ತಿಳಿಸಿದರು.
ನಗರ ಠಾಣೆಯ ಪಿಎಸ್ಐ ಕೃಷ್ಣಾ ಸುಬೇದಾರ್ ಮಾತನಾಡಿ, ಕೊರೊನಾ ಬರದಂತೆ ಇರಲು ಸ್ವಚ್ಛತೆಯ ಮದ್ದು ಎಂಬುದನ್ನು ಯುವಕರು ಅರಿತು ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಲ್ಮೀಕಿ ನಾಯಕ ಯುವ ಮುಖಂಡರಾದ ಮಲ್ಲೇಶ ನಾಯಕ, ಬಾಲರಾಜ ನಕ್ಕಲ್, ಗುರುರಾಜ ಬಗ್ಲಿ, ರವಿನಾಯಕ ಜಮ್ಮಾರ, ಹಣಮಂತ ಹುಲಕಲ್, ಸಾಬು ಜಮ್ಮಾರ, ಕುಮಾರ ನಾಯಕ, ಹಣಮಂತ ನಾಟೇಕರ್, ಈರಪ್ಪ ನಿಶಾನಿ ಸೇರಿದಂತೆ ಇನ್ನಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.