ಕೆಂಭಾವಿಯಲ್ಲಿ ನಿರಂತರ ಮಳೆಯಿಂದ ಹತ್ತಿ ಹೊಲದಲ್ಲಿ ನೀರು ನಿಂತು ಹಾನಿಯುಂಟಾದ ಪ್ರದೇಶವನ್ನು ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ವಾದಿರಾಜ ವೀಕ್ಷಿಸಿದರು.
ಕೆಂಭಾವಿ: ಪಟ್ಟಣ ಸೇರಿದಂತೆ ವಲಯದ ಬಹುತೇಕ ಗ್ರಾಮಗಳಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ.
ಪಟ್ಟಣ ಸೇರಿ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹತ್ತಿ ಮತ್ತು ತೊಗರಿ ಬೆಳೆಗಳ ಹೊಲಗಳಲ್ಲಿ ನೀರು ನಿಂತು ಕೆರೆಯಂತಾಗಿದೆ. ಬೆಳಗಳು ಸಂಪೂರ್ಣ ಕೊಳೆತು ಹೋಗುವ ಹಂತಕ್ಕೆ ತಲುಪಿದ್ದು, ರೈತರ ಸ್ಥಿತಿ ಚಿಂತಾಜನಕ ತಲುಪುವ ಲಕ್ಷಣಗಳು ಉದ್ಭವವಾಗಿವೆ.
ಪಟ್ಟಣ ಸೇರಿದಂತೆ ಯಾಳಗಿ, ಐನಾಪೂರ, ನಗನೂರ, ಎಂ.ಬೊಮ್ಮನಹಳ್ಳಿ, ಕಿರದಳ್ಳಿ, ಖಾನಾಪೂರ ಎಸ್.ಕೆ ಗ್ರಾಮಗಳ ಒಟ್ಟು 13 ಮನೆಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿರಂತರ ಮಳೆಯಿಂದ ರಸ್ತೆಗಳು ಹದಗೆಟ್ಟಿದ್ದು ಹುಣಸಗಿ-ಕೆಂಭಾವಿ ರಸ್ತೆ ಬಂದ್ ಆಗಿದೆ. ಕೆಂಭಾವಿ-ಮಲ್ಲಾ ರಸ್ತೆಯಲ್ಲಿರುವ ಕಾಟಮ್ಹಳ್ಳ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತವಾಗುವ ಲಕ್ಷಣಗಳು ಕಾಣಿಸುತ್ತವೆ.
ಸಮೀಪದ ಫತ್ತೇಪೂರ ಗ್ರಾಮದ ಯಲ್ಲಮ್ಮ ಗುಡ್ಡದಲ್ಲಿ ಮಳೆಯಿಂದ ಜಲಪಾತ ಸೃಷ್ಟಿಯಾಗಿದ್ದು, ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಭೋರ್ಗರೆಯುತ್ತಿರುವ ಪ್ರಕೃತಿ ಸೌಂದರ್ಯವನ್ನು ನೋಡಲು ಜನತೆ ತಂಡೋಪ ತಂಡವಾಗಿ ಆಗಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕೆಂಭಾವಿ ವಲಯದಲ್ಲಿ ಶುಕ್ರವಾರ ನಿರಂತರ ಸುರಿದ ಮಳೆಗೆ ಒಟ್ಟು 13 ಮನೆಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ. ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.ರಾಜೇಸಾಬ್ ಕಂದಾಯ ನಿರೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.