ಶಹಾಪುರ(ಯಾದಗಿರಿ ಜಿಲ್ಲೆ): ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುವಾಗ ಗೋಗಿ ಠಾಣೆಯ ಪೊಲೀಸರು ದಾಳಿ ಮಾಡಿ 76 ಕ್ವಿಂಟಾಲ್, ಅಂದಾಜು ₹2.62 ಲಕ್ಷದ ಮೌಲ್ಯದ ಪಡಿತರ ಅಕ್ಕಿ ಬುಧವಾರ ಜಪ್ತಿ ಮಾಡಿದ್ದಾರೆ.
ತಾಲ್ಲೂಕಿನ ಚಂದಾಪುರ ಗ್ರಾಮದ ಕಡೆಯಿಂದ ಗೋಗಿ (ಕೆ) ಗ್ರಾಮದ ಮೂಲಕ ಗೂಡ್ಸ್ ವಾಹನದಲ್ಲಿ ಸಾಗಣೆ ಮಾಡುತ್ತಿರುವಾಗ ಗೋಗಿ(ಕೆ) ಗ್ರಾಮದ ಶಹಾಪುರ-ಸಿಂದಗಿ ರಸ್ತೆ ಬಳಿ ಪೊಲೀಸರು ದಾಳಿ ಮಾಡಿ, ಗೂಡ್ಸ್ ವಾಹನ ಜಪ್ತಿ ಮಾಡಲಾಗಿದೆ ಎಂದು ಆಹಾರ ನಿರೀಕ್ಷಕ ಸಂಜೀವ ಕವಲಿ ದೂರಿನಲ್ಲಿ ತಿಳಿಸಿದ್ದಾರೆ.
ವಾಹನ ಚಾಲಕ ಗುರುಮಿಠಕಲ್ ತಾಲ್ಲೂಕಿನ ಬೋರಬಂಡಾ ಗ್ರಾಮದ ರಾಜು ಸೋಮ್ಲಾ ನಾಯಕ ಪವಾರ ಅವರನ್ನು ಬಂಧಿಸಿದ್ದಾರೆ.
ಚಾಮನಾಳ ತಾಂಡಾದ ದೇವರಾಜ ಲೋಕೇಶ ರಾಠೋಡ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಹಾಪುರ: ತಾಲ್ಲೂಕಿನ ನಾಗನಟಗಿ ತಾಂಡಾದ ಬಳಿ ಬುಧವಾರ ಶಾಲಾ ವಿದ್ಯಾರ್ಥಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಾಂಡಾದ 6ನೇ ತರಗತಿ ವಿದ್ಯಾರ್ಥಿ ಮನೋಜ ನೀಲು (13) ಮೃತಪಟ್ಟ ಬಾಲಕ.
ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.