ADVERTISEMENT

ವೈಯಕ್ತಿಕ ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ

ಯಲ್ಲಯ್ಯ ನಾಯಕ ವನದುರ್ಗ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 17:22 IST
Last Updated 5 ಜುಲೈ 2018, 17:22 IST
ಯಲ್ಲಯ್ಯ ನಾಯಕ
ಯಲ್ಲಯ್ಯ ನಾಯಕ   

ಶಹಾಪುರ: ‘ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿ ನಡೆದಿರುವ ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ಆದರೂ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವ ಪೌರಾಯುಕ್ತ ಬಸವರಾಜ ಶಿವಪೂಜೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಮನವಿ ಮಾಡಿದ್ದಾರೆ.

ಶಹಾಪುರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ₹1.85 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ₹1.11ಕೋಟಿ ಅನುದಾನ ಸೇರಿ ಒಟ್ಟು ₹ 2.96ಕೋಟಿ ಅನುದಾನ ಬಂದಿದೆ. ನಗರದ 23 ವಾರ್ಡ್‌ಗಳಲ್ಲಿ 3,060 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿತ್ತು. ಆದರೆ, ಈಗ ನಿರ್ಮಿಸಿರುವ ಶೌಚಾಲಯಗಳು ಕಳಪೆಯಾಗಿವೆ. ಮೂರನೇ ತಂಡದಿಂದ ಗುಣಮಟ್ಟದ ಬಗ್ಗೆ ವರದಿ ಪಡೆದಿಲ್ಲ. ಇ–ಟೆಂಡರ್ ಮೂಲಕ 500 ಶೌಚಾಲಯ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಟೆಂಡರ್ ಪ್ರಕ್ರಿಯೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿಲ್ಲ. ಟೆಂಡರ್ ನಿಯಮಗಳನ್ನು ಗಾಳಿಗ ತೂರಿ ಬೇಕಾಬಿಟ್ಟಿಯಾಗಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ದೂರಿದರು.

ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ₹47ಲಕ್ಷ ಅನ್ನು ಶೌಚಾಲಯ ನಿರ್ಮಾಣ ಹೆಸರಿನಲ್ಲಿ ಪಾವತಿಸಿದ್ದಾರೆ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ 422 ಫಲಾನುವಿಗಳಿಗೆ ₹2,660 ಮುಂಗಡವಾಗಿ ಹಣ ಪಾವತಿಸಿದ್ದಾರೆ. ಇಂದಿಗೂ ಒಬ್ಬ ವ್ಯಕ್ತಿಯೂ ಶೌಚಾಲಯ ನಿರ್ಮಿಸಿಕೊಂಡಿಲ್ಲ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ADVERTISEMENT

ಪೌರಾಯುಕ್ತರು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಅಕ್ರಮ ಎಸಗಿದ್ದಾರೆ. ಶೌಚಾಲಯ ನಿರ್ಮಾಣದ ಅಕ್ರಮದ ಬಗ್ಗೆ ಪ್ರತ್ಯೇಕವಾದ ತಂಡ ರಚಿಸಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರಸಭೆಯ ಬಿಜೆಪಿ ಸದಸ್ಯ ವಸಂತ ಸುರಪುರಕರ್ ಹಾಗೂ ಪಕ್ಷದ ಮುಖಂಡರಾದ ಚಂದ್ರಶೇಖರ ಯಾಳಗಿ, ನಿಂಗಣ್ಣ ರಾಕಂಗೇರಿ, ಶರಣಪ್ಪ ಹೊತಪೇಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.