ಸುರಪುರ: ‘ಕಾಂಗ್ರೆಸ್ ಮತ್ತು ಬಿಜೆಪಿಯ ಹಲವು ಪ್ರಭಾವಿ ಮುಖಂಡರು ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಟಿಕೆಟ್ ಕೇಳುತ್ತಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಹೇಳಿದರು.
ನಗರದ ಜೆಡಿಎಸ್ ಕಚೇರಿ ಉಸ್ತಾದ್ ಮಂಜಿಲ್ದಲ್ಲಿ ಭಾನುವಾರ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಪಕ್ಷ ಸೇರಲು ಭಯಸಿದ ಪ್ರಭಾವಿಗಳ ಹೆಸರನ್ನು ಸದ್ಯಕ್ಕೆ ಬಹಿರಂಗ ಪಡಿಸುವುದಿಲ್ಲ. ಅವರೂ ಪ್ರಕಟಿಸದಿರಲು ಮನವಿ ಮಾಡಿದ್ದಾರೆ. ನಾನು ರಾಜ್ಯ ನಾಯಕರ ಜತೆ ಈ ಬಗ್ಗೆ ಪರಾಮರ್ಶಿಸುತ್ತೇನೆ’ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತ ನೋಡಿರುವ ಮತದಾರ ಮೂರನೇ ವ್ಯಕ್ತಿಗೆ ಮಣೆ ಹಾಕುವುದು ಖಚಿತ. ನಮ್ಮ ಪಕ್ಷಕ್ಕೆ ಮತದಾರರ ಒಲವಿದೆ. ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ. ನಾವೂ ಸುರಪುರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಆರಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಣ್ಣ ಬಾಕ್ಲಿ ಮಾತನಾಡಿ, ಅಕಾಲಿಕ ಮಳೆಯಿಂದ ಭತ್ತ ಹಾನಿಯಾಗಿದೆ. ಸಂಕಷ್ಟದಲ್ಲಿರುವ ರೈತನಿಗೆ ಪರಿಹಾರ ದೊರಕುತ್ತಿಲ್ಲ. ಬೆಲೆ ಕುಸಿದಿದೆ. ರೈತರ ಪರವಾಗಿ ಪಕ್ಷ ಹೋರಾಟ ರೂಪಿಸುತ್ತದೆ ಎಂದು ತಿಳಿಸಿದರು.
ಪಂಚರಥ ಯಾತ್ರೆ ಜಿಲ್ಲೆಗೆ ಪ್ರವೇಶಿಸಲಿದೆ. ಅದ್ಧೂರಿ ಸ್ವಾಗತಕ್ಕೆ ತಯಾರಿ ನಡೆದಿದೆ. ಸುರಪುರದಲ್ಲೂ ಭವ್ಯ ಸ್ವಾಗತ ಕೋರಿ ದೊಡ್ಡ ಕಾರ್ಯಕ್ರಮ ಆಯೋಜಿಸೋಣ ಎಂದರು.
ಮುಖಂಡರಾದ ಶಿವಪ್ಪ ಸದಬ, ತಿಪ್ಪಣ್ಣ ಪೊಲೀಸಪಾಟೀಲ, ಶಾಂತು ತಳವಾರಗೇರಾ, ಶೌಕತ್ಅಲಿ ಖುರೇಶಿ, ದೇವಿಂದ್ರಪ್ಪ ಬಳಿಚಕ್ರ, ಅಲ್ತಾಫ ಸಗರಿ, ಮಲ್ಲನಗೌಡ ಬಾಚಿಮಟ್ಟಿ, ಲಕ್ಷ್ಮಣ ಕವಡಿಮಟ್ಟಿ, ಮಹಿಬೂಬ ಚೌಧರಿ, ಸದ್ದಾಮ ಹುಸೇನ, ದೇವೇಗೌಡ ವಾಡಿ, ರಾಮಚಂದ್ರನಾಯ್ಕ, ಶಾಂತಿಲಾಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.