ಗುರುಮಠಕಲ್: ಈಚಗೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಚರ್ಚೆ ನಡೆಯುತ್ತಿರುವುದು ಕಂಡುಬರುತ್ತಿದೆ. ಕಾರ್ಯಕರ್ತರು ಎದುರಾಳಿಗಳ ಟೀಕೆಗೆ ಪ್ರತಿಕ್ರಿಯೆ ಕೊಡುತ್ತ ಕಾಲಹರಣ ಮಾಡಬಾರದು. ನಮ್ಮದೇನಿದ್ದರೂ ಕ್ಷೇತ್ರದ ಜನರ ಸೇವೆ ಮಾಡುವ ಗುರಿ ಮಾತ್ರ ಆಗಬೇಕು ಎಂದು ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಸಲಹೆ ನೀಡಿದರು.
ಪಟ್ಟಣದ ಖಾಸಾಮಠದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್ ಮತಕ್ಷೇತ್ರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಮೂರುವರೆ ವರ್ಷಗಳ ನಾಗನಗೌಡ ಕಂದಕೂರ ಅವರು ಶಾಸಕರಾದ ಅವಧಿಯ ಅಭಿವೃದ್ಧಿ ಕೆಲಸಗಳು ಏನು ಎನ್ನುವುದನ್ನು ಮನೆ ಮನೆಗೆ ತಿಳಿಸಿದರೆ ಸಾಕು. ಬೇರೆಯವರಂತೆ ಟೀಕಾ ಪ್ರಹಾರ ಮಾಡುತ್ತ ಕುಳಿತುಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದರು.
ನಮ್ಮ ದೊಡ್ಡಪ್ಪ ಸದಾಶಿವರೆಡ್ಡಿ ಕಂದಕೂರ ಚುನಾವಣೆಯಲ್ಲಿ ಸೋತಿದ್ದರು. ತಂದೆ ಶಾಸಕ ನಾಗನಗೌಡ ಕಂದಕೂರ ಅವರೂ ಎರಡು ಬಾರಿ ಸೋತಿದ್ದಾರೆ. ಆದರೂ ನಮ್ಮ ಕಾರ್ಯಕರ್ತರಿಗಾಗಿ ದುಡಿದಿದ್ದೇವೆ. ಜನರಿಗಾಗಿ ಹೋರಾಟ ಮಾಡಿದ್ದೇವೆ. ನಂತರ ಜನರು ಮತ ನೀಡಿ ಗೆಲ್ಲಿಸಿದರು. ಅವರ ನಂಬಿಕೆಗೆ ನಾವು ಸದಾ ಋಣಿ ಎಂದು ಹೇಳಿದರು.
ತಾಳ್ಮೆ ಮತ್ತು ತ್ಯಾಗಗಳು ನಮ್ಮನ್ನು ಯಶಸ್ವಿಯಾಗಿಸುತ್ತವೆ. ಕಾರ್ಯಕರ್ತರು ಸಹನೆ ಕಳೆದುಕೊಳ್ಳದೆ ಕೆಲಸ ಮಾಡಬೇಕು. ಶಿಷ್ಟಾಚಾರಕ್ಕೆ ಕೆಲವರನ್ನು ನಾಯಕರನ್ನಾಗಿ ನೇಮಕ ಮಾಡುವ ಅವಶ್ಯಕತೆಯಿದ್ದು, ಅದರಂತೆ ನೇಮಕ ಮಾಡಲಾಗಿದೆ. ಉಳಿದಂತೆ ಎಲ್ಲರೂ ನಾಯಕರೆ ಆಗಿರುತ್ತೀರಿ. ಡಿ.10 ವೇಳೆಗೆ ಕಾರ್ಯಕರ್ತರು ಮತಕೇತ್ರದಲ್ಲಿ ಕನಿಷ್ಟ 50 ಸಾವಿರ ಜನರನ್ನು ಪಕ್ಷದ ಸದಸ್ಯರನ್ನಾಗಿಸುವ ಗುರಿ ತಲುಪಬೇಕು ಎಂದು ಕರೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಶರಣಗೌಡ ಕಂದಕೂರ ಅವರು ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಹೇಳಿಕೆಗಳು ಹರಿದಾಡುತ್ತಿವೆ. ಕಾರ್ಯಕರ್ತರು ಅಂಥ ಮಾತುಗಳನ್ನು ಎಲ್ಲಿಯೂ ಹೇಳಬೇಡಿ. ಪಕ್ಷದ ವರಿಷ್ಠರು ಯಾರಿಗೆ ಬಿ ಫಾರಂ ನೀಡುತ್ತಾರೋ ಅವರನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.
ನೂತನ ಅಧ್ಯಕ್ಷ ಪ್ರಕಾಶ ನಿರೇಟಿ ಹಾಗೂ ಪದಾಧಿಕಾರಿಗಳಿಗೆ ಮತಕ್ಷೇತ್ರ ಘಟಕದ ನಿಕಟಪೂರ್ವ ಅಧ್ಯಕ್ಷ ಶರಣು ಆವಂಟಿ ಪಕ್ಷದ ಧ್ವಜ ನೀಡಿ ಅಧಿಕಾರಿ ಹಸ್ತಾಂತರಿಸಿದರು. ಕಂದಕೂರ ಗ್ರಾಮದ ವಾರ್ಡ್ ನಂ.1 ರಲ್ಲಿ ತಮ್ಮ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಶರಣಗೌಡ ಕಂದಕೂರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.ಇದಕ್ಕೂ ಮೊದಲು ಚಿತ್ರಟ ದಿ.ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಭೀಮವ್ವ ಮುಕುಡಿ, ಪುರಸಭೆ ಸದಸ್ಯರಾದ ಬಾಲಪ್ಪ ದಾಸರಿ, ಪವಿತ್ರ ಲಿಕ್ಕಿ, ನವಾಜರೆಡ್ಡಿ ಗವಿನೋಳ, ಜಯಶ್ರೀ ಗವಿನೋಳ, ಸಿರಾಜ್ ಚಿಂತಕುಂಟಾ, ಪ್ರೀತಿಬಾಯಿ ಜೀತ್ರೆ, ಮುಖಂಡರಾದ ಜಿ.ತಮ್ಮಣ್ಣ, ಬಾಲಪ್ಪ ನಿರೇಟಿ, ಲಕ್ಷ್ಮೀರೆಡ್ಡಿ ಅನಪೂರ್, ಕಿಷ್ಟರೆಡ್ಡಿಗೌಡ ಗವಿನೋಳ, ಬಸಣ್ಣ ದೇವರಹಳ್ಳಿ, ಶರಣು ಅವುಂಟಿ, ನಿತ್ಯಾನಂದ ಪೂಜಾರಿ, ಅನಂತಪ್ಪ ಬೋಯಿನ್, ಭೀಮಶಪ್ಪ, ಸುಭಾಶ್ಚಂದ್ರ ಕಟಕಟಿ, ಅನಿಲ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರ ನಾಯಕ, ವಿಶ್ವನಾಥ ರ್ಯಾಖಾ, ಆಸೀಂ, ಬೋಜನಗೌಡ ಯಡ್ಡಳ್ಳಿ, ರಾಮಣ್ಣ ಕೋಟೆಗೇರಾ, ಸಣ್ಣೆಪ್ಪ, ಶಾರದಾ ಕಡೇಚೂರ ಸೇರಿದಂತೆ ಸೇರಿದಂತೆ ನೂತನ ಪದಾಧಿಕಾರಿಗಳು ಇದ್ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರ್ವಹಿಸಿ, ಮಲ್ಲಿಕಾರ್ಜುನ
ಅರುಣಿ ಸ್ವಾಗತಿಸಿದರು.
‘ಪಕ್ಷದ ನಿರ್ಧಾರಕ್ಕೆ ಬದ್ಧರಾಗೋಣ’
ಮುಂದಿನ ಚುನಾವಣೆಯಲ್ಲಿ ಶರಣಗೌಡ ಕಂದಕೂರ ಅವರು ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಹೇಳಿಕೆಗಳು ಹರಿದಾಡುತ್ತಿವೆ. ಕಾರ್ಯಕರ್ತರು ಅಂಥ ಮಾತುಗಳನ್ನು ಎಲ್ಲಿಯೂ ಹೇಳಬೇಡಿ. ಪಕ್ಷದ ವರಿಷ್ಠರು ಯಾರಿಗೆ ಬಿ ಫಾರಂ ನೀಡುತ್ತಾರೋ ಅವರನ್ನು ಗೆಲ್ಲಿಸಲು ಶ್ರಮಿಸೋಣ ಎಂದು ಶರಣಗೌಡ ಕಂದಕೂರ ಹೇಳಿದರು.
ನಾಯಕರೇ ಪಕ್ಷದ ಅಸ್ತಿತ್ವ. ನಾಯಕರು ಪಕ್ಷ ತೊರೆದರೆ ಪಕ್ಷವೆ ಇಲ್ಲದಂತಾಗುತ್ತದೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಆದ್ದರಿಂದ ನಾಅವು ಪಕ್ಷದಿಂದ ನಾಯಕ ಎನ್ನುವ ಧೋರಣೆಯನ್ನು ಅನುಸರಿಸೋಣ ಎಂದು ಜೆಡಿಎಸ್ ಐಟಿ ಘಟಕದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.