ಯಾದಗಿರಿ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (20) ಅಂಶಗಳು ಕಾರ್ಯಕ್ರಮಗಳನ್ನು ಒಳಗೊಂಡಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಸೋಮವಾರ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈಗ ಮಳೆಗಾಲವಾಗಿದ್ದರಿಂದ ಅಗತ್ಯ ಇರುವ ಕಾಮಗಾರಿಗಳು ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಯ 5 ಕಾಮಗಾರಿಗಳಲ್ಲಿ 2 ಕಾಮಗಾರಿ ಭೌತಿಕವಾಗಿ ಪೂರ್ಣಗೊಂಡಿವೆ. 3 ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಯೋಜನೆಯ 45 ಕಾಮಗಾರಿಗಳಲ್ಲಿ 24 ಕಾಮಗಾರಿಗಳು ಮುಗಿದಿದ್ದು, 21 ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರೌಢ ಶಿಕ್ಷಣದ 5 ಕಾಮಗಾರಿಗಳಲ್ಲಿ 4 ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಾಥಮಿಕ ಶಿಕ್ಷಣದ 82 ಕಾಮಗಾರಿಗಳಲ್ಲಿ 53 ಕಾಮಗಾರಿಗಳು ಪೂರ್ಣಗೊಂಡಿವೆ. 7 ಕಾಮಗಾರಿಗಳು ಪ್ರಗತಿಯಲ್ಲಿವೆ. 22 ಕಾಮಗಾರಿಗಳಿಗೆ ಸ್ಥಳದ ಲಭ್ಯತೆಯಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಕೆರೆಗಳ ಪುನರುಜ್ಜೀವನ ಕಾಮಗಾರಿಗಳು, ಭೌತಿಕವಾಗಿ ಪೂರ್ಣಗೊಂಡ, ಕಾಮಗಾರಿ ಪ್ರಗತಿಯಲ್ಲಿರುವ, ಟೆಂಡರ್ ಪ್ರಕಿಯೆಯಲ್ಲಿರುವ, ನದಿಯಿಂದ ಪೈಪ್ಲೈನ್ ಕಾಮಗಾರಿ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ಕುರಿತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಅಧಿಕಾರಿಗಳು ಮಾಹಿತಿ ನೀಡಿದರು.
ಮೇ, ಜೂನ್ ತಿಂಗಳಿನ ಎನ್ಎಫ್ಎಸ್ಎ ಮತ್ತು ಎಂಎಸ್ಪಿ ಯೋಜನೆಯಡಿ ಜೋಳ, ಅಕ್ಕಿ ಹಂಚಿಕೆ ಹಾಗೂ ಎತ್ತುವಳಿ, ಮೇ-ಜೂನ್ಗೆ ಪಿಎಂಜಿಕೆಎವೈ ಯೋಜನೆಯಡಿ ಬಂದ ಅಕ್ಕಿಯೂ ಶೇ 100 ರಷ್ಟು ಎತ್ತುವಳಿಯಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
29 ಅರ್ಜಿಗಳನ್ನು ಸಾಲ ಮಂಜೂರಾತಿಗಾಗಿ ವಿವಿಧ ಬ್ಯಾಂಕುಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.