ADVERTISEMENT

ಶಹಾಪುರ: ಮತ್ತೆ ಬದುಕು ಕಟ್ಟಿಕೊಳ್ಳುವ ಧಾವಂತ...!

ಟಿ.ನಾಗೇಂದ್ರ
Published 2 ಸೆಪ್ಟೆಂಬರ್ 2025, 4:37 IST
Last Updated 2 ಸೆಪ್ಟೆಂಬರ್ 2025, 4:37 IST
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಕೃಷ್ಣಾ ನದಿ ತಟದ ರೈತರು ಸೋಮವಾರ ಪ್ರವಾಹ ಇಳಿಮುಖವಾಗಿದ್ದರಿಂದ ಕೃಷಿ ಪಂಪಸೆಟ್ ದುರಸ್ತಿಗೊಳಿಸಿದರು
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಕೃಷ್ಣಾ ನದಿ ತಟದ ರೈತರು ಸೋಮವಾರ ಪ್ರವಾಹ ಇಳಿಮುಖವಾಗಿದ್ದರಿಂದ ಕೃಷಿ ಪಂಪಸೆಟ್ ದುರಸ್ತಿಗೊಳಿಸಿದರು   

ಶಹಾಪುರ: ಒಂದು ವಾರ ಪ್ರವಾಹದ ಸಂಕಷ್ಟ ಎದುರಿಸಿದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಕೃಷ್ಣೆಯ ಪ್ರವಾಹ ತಗ್ಗಿದೆ. ಆಗ ರೈತರು ಪ್ರವಾಹ ಸಂದರ್ಭದಲ್ಲಿ ಸುರಕ್ಷಿತ ಸ್ಥಳಕ್ಕೆ ತಂದಿಟ್ಟ ವಿದ್ಯುತ್ ಸಾಮಗ್ರಿಗಳನ್ನು ಈಗ ಮತ್ತೆ ಜೋಡಣೆ ಕಾರ್ಯದಲ್ಲಿ ಮಗ್ನರಾಗಿ ಮತ್ತೆ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮಗ್ನರಾಗಿದ್ದಾರೆ.

‘ಪ್ರವಾಹ ಬಂದಾಗ ಸದಾ ದುಗುಡವನ್ನು ಎದುರಿಸುವ ನಾವು ಮತ್ತೆ ಪ್ರವಾಹ ಇಳಿಮುಖಗೊಂಡಾಗ ಬೆಳೆ ಸಂರಕ್ಷಣೆಗಾಗಿ ದೌಡಾಯಿಸುತ್ತೆವೆ. ಪ್ರವಾಹದ ಹೊಡೆತಕ್ಕೆ ಎಲ್ಲಿ ಟಿ.ಸಿ ಹಾಳಾಗಿದೆ, ವೈರ್ ಕಟ್ ಆಗಿದೆ, ಸ್ಟಾಟರ್ ಬಂದ್‌ ಆಗಿದಿಯಾ? ಹೀಗೆ ನಾನಾ ದುಗುಡದಿಂದಲೇ ನದಿಗೆ ಇಳಿಯುತ್ತವೆ. ನದಿಯ ನೀರಿನ ಮೇಲೆ ಬದುಕು ರೂಪಿಸಿಕೊಳ್ಳುತ್ತೇವೆ. ಒಂದೊಂದು ಸಲ ಅದೇ ನೀರು ನಮ್ಮ ಬದುಕು ಮುಳುಗಿಸುತ್ತದೆ. ಪ್ರವಾಹ ನಮ್ಮ ಪಾಲಿಗೆ ಸಿಹಿ-ಕಹಿ ಎರಡನ್ನು ಸಮನಾಗಿ ಹಂಚಿಕೆ ಮಾಡಿದೆ’ ಎನ್ನುತ್ತಾರೆ ನದಿ ಪಾತ್ರದ ರೈತರು.

ವಾಯುಭಾರ ಕುಸಿತದಿಂದ ಒಂದು ವಾರ ಮಳೆಯ ಅವಾಂತರದಲ್ಲಿ ಜನತೆ ಸಿಲುಕಿದ್ದರು. ಅಲ್ಲದೆ ನೆರೆಯ ಮಹಾರಾಷ್ಟ್ರದಲ್ಲಿ ಅಧಿಕ ಮಳೆಯಾಗಿದ್ದರಿಂದ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬಂದಿತು. ಆಗ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಾದ ಕೊಳ್ಳೂರ(ಎಂ), ಮರಕಲ್, ಗೌಡೂರ, ಟೊಣ್ಣೂರ ಸೇರಿದಂತೆ ಹಲವು ಹಳ್ಳಿಗಳ ವಾರದ ಹಿಂದೆ ಪ್ರವಾಹದ ಸಂಕಷ್ಟ ಎದುರಿಸಿದವು. ಅಲ್ಲದೆ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆ ಪ್ರವಾಹ ನೀರು ಹರಿದು ಬಂದಿದ್ದರಿಂದ ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ ಎನ್ನುತ್ತಾರೆ ಕೊಳ್ಳೂರ ಗ್ರಾಮದ ಮುಖಂಡ ನಾಗಪ್ಪ ನರಬೋಳ.

ADVERTISEMENT

ಕೃಷ್ಣಾ ನದಿಯ ಎಡ ಮತ್ತು ಬಲ ಭಾಗದ ಪ್ರದೇಶದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ನದಿ ನೀರು ಸೆಳೆದುಕೊಂಡು ಹತ್ತಿ, ಭತ್ತ, ಮೆಣಸಿನಕಾಯಿ, ತೊಗರಿ ಬೆಳೆ ಬಿತ್ತನೆ ಮಾಡಿದ್ದೇವೆ.ತಾಲ್ಲೂಕು ಆಡಳಿತ ಪ್ರವಾಹದ ಮುನ್ಸೂಚನೆ ನೀಡಿದ್ದರಿಂದ ನದಿಗೆ ಹೊಂದಿಕೊಂಡು ಹಾಕಿದ ವಿದ್ಯುತ್ ವೈರ್‌, ಮೋಟಾರ್, ಪೈಪ್‌ ಹಾಗೂ ಇನ್ನಿತರ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ತಂದಿಟ್ಟಿದ್ದೇವೆ. ಈಗ ಪ್ರವಾಹ ಇಳಿಮುಖವಾಗಿದ್ದರಿಂದ ಬೆಳೆಗೆ ನೀರು ಹಾಯಿಸಲು ಮತ್ತೆ ವಿದ್ಯುತ್ ಸಾಮಗ್ರಿಗಳನ್ನು ಅಳವಡಿಸುತ್ತಿದ್ದೇವೆ. ಒಂದು ಸಲ ಪ್ರವಾಹ ಬಂದು ಹೊದರೆ ನಮಗೆ ಕನಿಷ್ಠ ₹5ರಿಂದ10 ಸಾವಿರ ವೆಚ್ಚವಾಗುತ್ತದೆ ಎನ್ನುತ್ತಾರೆ ಕೊಳ್ಳೂರ ಗ್ರಾಮದ ರೈತ ಶಿವರೆಡ್ಡಿ.

ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಕೃಷ್ಣಾ ನದಿ ತಟದ ರೈತರು ಸೋಮವಾರ ಪ್ರವಾಹ ಇಳಿಮುಖವಾಗಿದ್ದರಿಂದ ಕೃಷಿ ಪಂಪಸೆಟ್ ದುರಸ್ತಿಗೊಳಿಸಿದರು
ಕೃಷ್ಣೆಯ ಪ್ರವಾಹ ತಗ್ಗಿದ್ದರಿಂದ ಮತ್ತೆ ವಿದ್ಯುತ್ ಸಂಪರ್ಕದಲ್ಲಿ ಮಗ್ನರಾಗಿದ್ದೇವೆ. ಪ್ರವಾಹ ಬಂದು ಮರೆಯಾದರೆ ನಾವು ₹5ರಿಂದ 10 ಸಾವಿರ ಹಣ ವೆಚ್ಚ ಬೆಳೆ ನಷ್ಟವನ್ನೂ ಅನುಭವಿಸಬೇಕು
ಶಿವರೆಡ್ಡಿ ಪಾಟೀಲ ರೈತ ಕೊಳ್ಳೂರ(ಎಂ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.