ಶಹಾಪುರ (ಯಾದಗಿರಿ ಜಿಲ್ಲೆ): ನನಗೆ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಸದನದಲ್ಲಿ ಭಾಗವಹಿಸಲು ಸಾಧ್ಯ ಆಗಿಲ್ಲ. ವಿಧಾಸಭಾಧ್ಯಕ್ಷರು ನೋಟಿಸ್ ನೀಡಿರುವುದನ್ನು ಪತ್ರಿಕೆ ಮೂಲಕ ತಿಳಿದುಕೊಂಡೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದರು.
ಶಹಾಪುರದಲ್ಲಿ ಭಾನುವಾರ ಪತ್ರಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿರುವ ನೋಟಿಸ್ ನನಗೆ ತಲುಪಿಲ್ಲ. ತಲುಪಿದ ತಕ್ಷಣ ಉತ್ತರಿಸುವೆ ಎಂದರು.
ನಾನು 1989ರಿಂದಲೂ ಒಮ್ಮೆಯೂ ವಿಧಾನಸಭೆ ಅಧಿವೇಶನಕ್ಕೆ ಗೈರಾಗಿಲ್ಲ. ಈಗ ಕಾಲು ನೋವು ಬಂದ ಕಾರಣ ಹಾಜರಾಗಿಲ್ಲ ಎಂದು ಸಮರ್ಥಿಸಿಕೊಂಡರು. ಆದರೆ, ಕಾಲು ನೋವು ಇರುವ ಬಗ್ಗೆ ವಿಧಾನಸಭಾಧ್ಯಕ್ಷರ ಅನುಮತಿ ಪಡೆಯಬೇಕಾಗಿತ್ತು. ಅದು ಪಡೆದಿಲ್ಲದ ಕಾರಣ ಅವರು ನೋಟಿಸ್ ನೀಡಿರಬಹುದು ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆ ಅಲ್ಲಿ ಭಾರತ್ ತೋಡೊ ಯಾತ್ರೆಯಾಗಿ ಬದಲಾಗಿದೆ ಎಂದು ಲೇವಡಿ ಮಾಡಿದರು.
ಕಲಬುರಗಿಯಲ್ಲಿ ಅಕ್ಟೋಬರ್ 30ರಂದು ನಡೆಯುವ ಹಿಂದುಳಿದ ವರ್ಗಗಳ ಸಮಾವೇಶದ ಪೂರ್ವಭಾವಿ ಸಭೆ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
ಸೂಕ್ತ ಕಾರಣ ನೀಡದೆ, ಅನುಮತಿಯನ್ನೂ ಪಡೆಯದೆ ವಿಧಾನಸಭೆ ಅಧಿವೇಶನಕ್ಕೆ ಗೈರಾಗಿರುವ ಶಾಸಕರಾದ ಕೆ. ಎಸ್. ಈಶ್ವರಪ್ಪ, ರಮೇಶ ಜಾರಕಿಹೊಳಿ ಅವರಿಗೆ ಕಾರಣ ಕೇಳಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೋಟಿಸ್ ಜಾರಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.