ಯಾದಗಿರಿ: ಇನ್ನುಳಿದ 6 ತಿಂಗಳ ಅವಧಿಗೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯ ಠಾಣಾಗುಂದಿ ಸದಸ್ಯೆ ಲಲಿತಾ ಮರೆಪ್ಪ ಪೂಜಾರಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಬೆಳಿಗ್ಗೆ 10 ರಿಂದ 11 ಗಂಟೆಗೆ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಈ ವೇಳೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಿತು. ನಂತರ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಗುರುಮಠಕಲ್ ತಾಲ್ಲೂಕು ಪಂಚಾಯಿತಿ ಕೇಂದ್ರವಾಗಿ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇಲ್ಲಿರುವ ತಾಲ್ಲೂಕು ಪಂಚಾಯಿತಿ ವಿಭಜನೆಯಾಗಿ ಅಲ್ಲಿ ಹೊಸದಾಗಿ ಆಡಳಿತ ಮಂಡಳಿ ರಚನೆಯಾಗಿದೆ. ಈ ಮೊದಲು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಗುರುಮಠಕಲ್ ತಾಲ್ಲೂಕಿನ ಅಜಲಾಪುರ ತಾ.ಪಂ. ಸದಸ್ಯೆ ರಾಮಲಿಂಗಮ್ಮ ಕವಡಿ ಅವರ ಕ್ಷೇತ್ರ ಗುರುಮಠಕಲ್ ತಾ.ಪಂ.ಗೆ ಸೇರ್ಪಡೆಗೊಂಡಿತು. ಇದರಿಂದ ಈ ಸ್ಥಾನ ತೆರವಾಗಿತ್ತು. ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ತಾ.ಪಂ. ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಲಲಿತಾ ಮರೆಪ್ಪ ಪೂಜಾರಿ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು, ನಾಮಪತ್ರಕ್ಕೆ ಮುಂಡರಗಿ ತಾ.ಪಂ. ಸದಸ್ಯ ಮಕ್ಬೂಲ ಪಟೇಲ್ ಸೂಚಕರಾಗಿದ್ದರು.
ಚುನಾವಣೆ ಅಧಿಕಾರಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ನಾಮಪತ್ರ ಪರಿಶೀಲಿಸಿ, ಲಲಿತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ತಹಶೀಲ್ದಾರ್ಚನ್ನಮಲ್ಲಪ್ಪ ಘಂಟಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಇದ್ದರು.
19 ಸದಸ್ಯರ ಪೈಕಿ ಬಿಜೆಪಿಯ 12 ಸದಸ್ಯರು ಹಾಗೂ ವರ್ಕನಳ್ಳಿಯ ಕಾಂಗ್ರೆಸ್ ತಾ.ಪಂ. ಸದಸ್ಯೆ ಯಂಕಮ್ಮ ಸೇರಿದಂತೆ 13 ಜನ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.