ಯಾದಗಿರಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಲ್ಯಾಣಿಗಳಲ್ಲಿ ಜಲ ಕ್ರಾಂತಿ ಮಾಡಲಾಗಿದೆ.
ಜಿಲ್ಲೆಯ ಪುರಾತನ ಕಾಲದ ನೂರಾರು ಕಲ್ಯಾಣಿಗಳಿವೆ. ಅವು ಪಾಳು ಬಿದ್ದು, ನೀರು ಉಪಯೋಗಕ್ಕೆ ಬಾರದ ರೀತಿಯಲ್ಲಿ ಇದ್ದವು. ಇದನ್ನು ಗಮನಿಸಿದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಂಡು ಪುನಶ್ಚೇತನ ಮಾಡಿದ್ದಾರೆ. ಇದರಿಂದ ಈಗ ನೀರು ಸ್ವಚ್ಛವಾಗಿದ್ದು, ಕೆಲ ಕಡೆ ಹೊಲ, ಗದ್ದೆಗಳಿಗೆ ಬಳಕೆ ಮಾಡಲಾಗುತ್ತಿದೆ. ಇನ್ನೂ ಕೆಲ ಕಡೆ ಬೇಸಿಗೆಯ ಈಜುಕೊಳವಾಗಿ ಮಾರ್ಪಟ್ಟಿವೆ. ಅಂತರ್ಜಲವೂ ಹೆಚ್ಚಳವಾಗಿದೆ.
ನೂರಾರು ಅಡಿ ಆಳದ ಕಲ್ಯಾಣಗಳಲ್ಲಿ ನೀರಿನ ಸೆಲೆ ಇದ್ದು, ನೀರಿಗೆ ಬರವಿಲ್ಲ. ಇಂಥವುಗಳನ್ನು ಸಂರಕ್ಷಿಸುವ ಕೆಲಸ ಜಿಲ್ಲಾ ಪಂಚಾಯಿತಿ ವತಿಯಿಂದ ಮಾಡಲಾಗುತ್ತಿದೆ.
2019-20ನೇ ಸಾಲಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ರಮ ಕೈಗೊಂಡ ಜಿಲ್ಲೆಯಾಗಿದೆ.
ಕಲ್ಯಾಣಿ ಗಾತ್ರಕ್ಕೆ ಅನುಗುಣವಾಗಿ ಒಂದೂವರೆ ಲಕ್ಷದಿಂದ ಐದು ಲಕ್ಷಗಳವರೆಗೆ ಖರ್ಚು ಮಾಡಲಾಗುತ್ತಿದೆ. 2019–20ರಲ್ಲಿ 60 ಕಲ್ಯಾಣಿಗಳನ್ನು ಪುನಶ್ಚೇತನ ಮಾಡಲಾಗುತ್ತಿದೆ.
‘ಕಲ್ಯಾಣಿಗಳು ಸಾಂಪ್ರದಾಯಿಕ ಜಲಮೂಲಗಳಾಗಿದ್ದು, ಗ್ರಾಮೀಣ ಜನರ ನಿರಾಸಕ್ತಿ, ನಿಷ್ಕಾಳಜಿಯಿಂದ ಇಂಥ ಕಲ್ಯಾಣಿಗಳು ಶಿಥಿಲಗೊಂಡು, ಪಾಳು ಬಿದ್ದಿದ್ದವು. ಜಿಲ್ಲಾ ಪಂಚಾಯಿತಿ ಇಂಥ ಪ್ರಾಚೀನ ಕಲ್ಯಾಣಿಗಳ ಪುನಶ್ಚೇತನಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ವಿಶೇಷ ಕಾರ್ಯಕ್ರಮ ರೂಪಿಸಿ, ಪುನಶ್ಚೇತನಗೊಳಿಸಿದ್ದರಿಂದ ಜಿಲ್ಲೆಯ ಕಲ್ಯಾಣಿಗಳು ನೀರು ತುಂಬಿಕೊಂಡು ನಳನಳಿಸುತ್ತಿವೆ’ ಎನ್ನುತ್ತಾರೆಯಾದಗಿರಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಮುಕ್ಕಣ್ಣಕರಿಗಾರ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲೆಯ ಕಲ್ಯಾಣಿ ಪುನಶ್ಚೇತನ ಕಾರ್ಯಕ್ರಮವು ಮಾದರಿ ಕಾರ್ಯಕ್ರಮ ಎಂದು ಹೊಗಳಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸೂಚಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಕೆ.ಎಸ್.ಈಶ್ವರಪ್ಪ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಲ್ಯಾಣಿ ಪುನಶ್ಚೇತನ ಕಾಮಗಾರಿಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ಎಲ್ಲಾ ಕಲ್ಯಾಣಿಗಳ ಸರ್ವೆ ಮಾಡಿ, ಸಮಗ್ರವಾಗಿ ಅಭಿವೃದ್ಧಿ ಪಡಿಸಿ’ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡುತ್ತಾರೆ.
***
2020–21ರ ಸಾಲಿನಲ್ಲಿ ಜಿಲ್ಲೆಯ 30 ಕಲ್ಯಾಣಿಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. ಜೊತೆಗೆ 122 ಕೆರೆಗಳಲ್ಲಿ ಹೂಳೆತ್ತಲಾಗುವುದು.
-ಮುಕ್ಕಣ್ಣ ಕರಿಗಾರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ, ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.